ಯುರೇನಿಯಂ ಗಣಿಗಾರಿಕೆಯಿಂದ ಬದುಕೇ ನಾಶ : ನಾಗೇಶ್
ಬುಧವಾರ ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸೂರಿ ಸಭಾಂಗಣದಲ್ಲಿ ಏರ್ಪಡಿಸಿದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಹಾಗೂ ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನ ಗುಲಬರ್ಗಾ ಜಂಟಿಯಾಗಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ 'ಗೋಗಿಯ ಬಾಗಿಲಲ್ಲಿ ಪರಮಾಣು' ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ನಡೆಯುತ್ತಿರುವ ಯುರೇನಿಯಂ ಗಣಿಗಾರಿಕೆಯಿಂದ ಪರಿಸರ ಹದಗೆಟ್ಟು ಜನತೆಗೆ ಅನೇಕ ಮಾರಣಾಂತಿಕ ರೋಗಗಳು ಬದುಕಿನ ಉದ್ದಕ್ಕೂ ಕಾಡುತ್ತವೆ. ಮಾನವ ಜನಾಂಗಕ್ಕೆ ಸುರಕ್ಷಿತ ಎಂದು ಸಾಬೀತಾಗುವವರೆಗೂ ಬಳಕೆ ಮೇಲೆ ನಿಷೇಧ ವಿಧಿಸಬೇಕು ಎಂದು ಅವರು ಸಲಹೆ ಮಾಡಿದರು.
ಯುರೇನಿಯಂ ಗಣಿಗಾರಿಕೆಯಲ್ಲಿ ಶೇ. 0.1ರಷ್ಟು ಮಾತ್ರ ಯುರೇನಿಯಂ ದೊರೆಯುತ್ತದೆ. ಇದರಲ್ಲಿ ರೆಡಾನ್ ಎನ್ನುವ ಗ್ಯಾಸ್ ಉತ್ಪತ್ತಿಯಾಗಿ ಗಾಳಿ, ನೀರಿನಲ್ಲಿ ಸಂಗ್ರಹವಾಗಿ ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಯುರೇನಿಯಂ ಗಣಿಗಾರಿಕೆಯಿಂದ ಬದುಕಿನ ಹಕ್ಕು ಕಸಿದುಕೊಳ್ಳುವ ಅಪಾಯವಂತೂ ಗ್ಯಾರಂಟಿ. ಗೋಗಿಯಲ್ಲಿ ಎಂಟು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದ್ದು ಈಗಾಗಲೇ ಗ್ರಾಮಸ್ಥರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗಣಿಗಾರಿಕೆಯ ದುಷ್ಪರಿಣಾಮದ ಬಗ್ಗೆ ಅವರು ವಿವರಿಸಿದರು.
15 ವರ್ಷಗಳ ಗಣಿಗಾರಿಕೆ ಅವಧಿಯಲ್ಲಿ ಸಿಗುವ ಯುರೇನಿಯಂ 4,000 ಟನ್. ಇದರಿಂದ ನಮ್ಮ ದೇಶಕ್ಕೆ ನಾಲ್ಕು ತಿಂಗಳು ಮಾತ್ರ ವಿದ್ಯುತ್ ಒದಗಿಸಲು ಸಾಧ್ಯ. ಈ ನಾಲ್ಕು ತಿಂಗಳ ವಿದ್ಯುತ್ಗಾಗಿ 15 ವರ್ಷ ಗಣಿಗಾರಿಕೆ ಮಾಡಿ ಸಾವಿರಾರು ಮುಗ್ದ ಜನರ ಬದುಕು ಬಲಿಗೊಡಬೇಕೆ? ಮೊದಲು ಸೌಕರ್ಯ ಕೊಡಿ ನಂತರ ಯುರೇನಿಯಂ ಪಡೆಯಿರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋಗಿಯ ಧ್ವನಿ ದೆಹಲಿಗೆ ಮುಟ್ಟುವ ಹಾಗೆ ಗೋಗಿ ಜನರ ಜೊತೆ ವಿದ್ಯಾರ್ಥಿಳು ಕೈಜೋಡಿಸಿ ಸಹಾಯ ಮಾಡಿ ಎಂದು ವಿದ್ಯಾರ್ಥಿಗಳನ್ನು ಅವರು ವಿನಂತಿಸಿದರು. ಕಾರ್ಯಕ್ರಮದಲ್ಲಿ ಯುರೋನಿಯಂ ಗಣಿಗಾರಿಕೆ ಕುರಿತು ಅವರು ನೀಡಿದ ಚಿತ್ರ-ದೃಶ್ಯ ವಿವರಗಳು ನೋಡುಗರ ಮನಕಲುಕಿದವು. ತದನಂತರ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ 'ಹಳೆಯ ಇಂಧನ ಹೊಸ ಎಂಜಿನ್' ಕುರಿತು ಉಪನ್ಯಾಸ ಮಾಡಿದರು.