ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಕಂಡ ದುರದೃಷ್ಟವಂತ ನಾಯಕ ಜಗದೀಶ್ ಶೆಟ್ಟರ್

By * ಪ್ರಸಾದ ನಾಯಿಕ
|
Google Oneindia Kannada News

Tragedy king of Karnataka politics Jagadish Shettar
ಬಹುಶಃ ಕರ್ನಾಟಕದ ರಾಜಕೀಯ ಇತಿಹಾಸ ಕಂಡ ಅತ್ಯಂತ ದುರದೃಷ್ಟವಂತ ನಾಯಕ ಅಂದರೆ ಹುಬ್ಬಳ್ಳಿಯ ಅನಭಿಷಿಕ್ತ ದೊರೆ ಜಗದೀಶ್ ಶೆಟ್ಟರ್. ಕೈಗೆ ಬಂದ ತುತ್ತು ಅವರ ಬಾಯಿಯ ಬಳಿಗೆ ಯಾವತ್ತೂ ಬಂದಿಲ್ಲ. ಹಾಗೆಯೇ, ಅವರಷ್ಟು 'ಕೈತುತ್ತು' ಹಾಕಿಸಿಕೊಂಡ ದುರಂತ ನಾಯಕ ಇನ್ನೊಬ್ಬನಿರಲಿಕ್ಕಿಲ್ಲ.

ನಿಮ್ಮನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆಂದು ಆಶೆ ತೋರಿಸಿ, ರಾಜೀನಾಮೆಯ ನಾಟಕವಾಡಿ, ದೆಹಲಿಯಿಂದ ಹಿರಿಯ ಬಂದಾಗ ಮುಖ್ಯಮಂತ್ರಿ ಪಟ್ಟದ ಬಗ್ಗೆ ಬಿಟ್ಟು ಉಳಿದೆಲ್ಲ ಕೆಲಸಕ್ಕೆ ಬಾರದ ವಿಷಯ ಚರ್ಚಿಸಿ, ನಂತರ ರಾಜೀನಾಮೆಯನ್ನು ಹಿಂತೆಗೆದುಕೊಂಡು ಯಡಿಯೂರಪ್ಪ ಬಣದ ಶಾಸಕರು ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಮಂಗ್ಯಾನನ್ನಾಗಿ ಮಾಡಿದ್ದಾರೆ. ಶೆಟ್ಟರ್ ಅವರನ್ನು ಆಟದ ದಾಳವನ್ನಾಗಿ ಮಾಡಿಕೊಂಡಿದ್ದು ಇದೆಷ್ಟನೇ ಬಾರಿ?

ಫೆ.24ರಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಗೆಸ್ಟ್ ಲೈನ್ ರೆಸಾರ್ಟಿನಲ್ಲಿ ನಡೆದ ಬಿಜೆಪಿ ನಾಯಕರ ಮತ್ತು ಶಾಸಕರ ಬೃಹನ್ನಾಟಕದಲ್ಲಿ, ಹಣ ಬಲ ಮತ್ತು ಜನ ಬಲ ಎರಡೂ ಇರದ ಜಗದೀಶ್ ಶೆಟ್ಟರ್ ಅವರು ಒಬ್ಬ ಸೂತ್ರದ ಗೊಂಬೆ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಡಿಸಿದಾತ ಆಟ ಮುಗಿಸಿ ಹೊರನಡೆದಿದ್ದಾನೆ, ಶೆಟ್ಟರ್ ಮಾತ್ರ ಕಾಸ್ಟ್ಯೂಮನ್ನು ಇನ್ನೂ ಧರಿಸಿ ಹಾಗೆಯೇ ಕುಳಿತಿದ್ದಾರೆ. ಮುಖ್ಯಮಂತ್ರಿ ಪದವಿ ತಮ್ಮನ್ನೇ ಹುಡುಕಿಕೊಂಡು ಬರುತ್ತದೆಂದು ಹಾಗೇ ಕುಳಿತಿದ್ದರೆ ಕುಳಿತೇ ಇರಬೇಕಾಗುತ್ತದೆ.

ಈಗ ಕನಿಷ್ಠ ನಾಲ್ಕನೇ ಬಾರಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದಂತಾಗಿದೆ. ಜನ ಸಂಘದ ಅತ್ಯಂತ ನಿಷ್ಠಾವಂತ ನಾಯಕನಾಗಿ, ವಿಧಾನಸಭೆ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಶಾಸಕನಾಗಿ, ಬಿಜೆಪಿ ಸರಕಾರದಲ್ಲಿ ನಾನಾ ಮಂತ್ರಿ ಸ್ಥಾನವನ್ನು ಅಲಂಕರಿಸಿರುವ, ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನ ಕಾಡಿದಷ್ಟು ಬೇರಾರನ್ನೂ ಕಾಡಿಸಿಲ್ಲ.

'ಪ್ರಭಾವಿ' ರಾಜಕಾರಣಿಗಳು ಉರುಳಿಸಿದ ದಾಳಕ್ಕೆ ತಕ್ಕಂತೆ ನಡೆಯುವ ಪಗಡೆಯ ಕಾಯಿಯಂತಾಗಿರುವ ಜಗದೀಶ್ ಶೆಟ್ಟರ್ ಅನೇಕ ರಾಜಕಾರಣಿಗಳ ಹುನ್ನಾರಗಳಿಗೆ ಬಲಿಯಾಗಿದ್ದಾರೆ. ಸದ್ಯಕ್ಕೆ ಡಿವಿ ಸದಾನಂದ ಗೌಡರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಯಾರನ್ನು ನಂಬುವುದೋ ಯಾರನ್ನು ಬಿಡುವುದೋ ಎಂಬ ಸಂದಿಗ್ಧತೆ ಉಂಟಾಗಿರುವುದಂತೂ ಸತ್ಯ.

ಮೊದಲನೇ ಬಾರಿ ಯಡಿಯೂರಪ್ಪನವರ ವಿರುದ್ಧ ಜನಾರ್ದನ ರೆಡ್ಡಿ ಮತ್ತು ಗ್ಯಾಂಗ್ ದಂಗೆ ಎದ್ದಿದ್ದಾಗ, ಅವರನ್ನು ಕಿತ್ತುಹಾಕಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರೆಡ್ಡಿಗಳು ಪಟ್ಟುಹಿಡಿದಿದ್ದರು. ಕೊನೆಗೆ, ಯಡಿಯೂರಪ್ಪ ಕಣ್ಣೀರು ಹಾಕಿ, ಶೋಭಾರನ್ನು ಕಿತ್ತೊಗೆದು, ಅವರ ಸ್ಥಾನಕ್ಕೆ ಶೆಟ್ಟರ್ ಅವರನ್ನು ತಂದು ಕೂಡಿಸುವಲ್ಲಿ ಪರ್ಯವಸಾನವಾಗಿತ್ತು. ಶೆಟ್ಟರ್ ಅವರು ನಗುನಗುತಲೇ ಸಚಿವ ಸ್ಥಾನಕ್ಕೆ ಯಸ್ ಅಂದಿದ್ದರು.

ನಂತರ ಯಡಿಯೂರಪ್ಪನವರು ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿ, ಮುಖ್ಯಮಂತ್ರಿ ಪದವಿ ತ್ಯಜಿಸುವ ಸಂದರ್ಭ ಬಂದಾಗ, ಮೊದಲ ಹೆಸರು ಕೇಳಿ ಬಂದಿದ್ದೇ, ಯಡಿಯೂರಪ್ಪ ಅವರ ಕಟ್ಟಾ ವಿರೋಧಿ ಜಗದೀಶ್ ಶೆಟ್ಟರ್ ಅವರ ಹೆಸರು. ಯಾರ ಬಣದೊಡನೆಯೂ ಗುರುತಿಸಿಕೊಂಡಿರದಿದ್ದ ಶೆಟ್ಟರ್ ಅರ್ಹ ವ್ಯಕ್ತಿಯಾಗಿದ್ದರು. ಆಗಲೂ ಯಡಿಯೂರಪ್ಪ ಅವರ ಹಟಕ್ಕೆ ಮಣಿದ ಹೈಕಮಾಂಡ್ ಸದಾನಂದ ಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅತ್ಯುನ್ನತ ಪದವಿ ಶೆಟ್ಟರ್ ಕೈಯಿಂದ ಮತ್ತೆ ಜಾರಿತ್ತು. ನನ್ನ ಮಗನಿಗೆ ಅನ್ಯಾಯವಾಗುತ್ತಿದೆ ಎಂದು ಶೆಟ್ಟರ್ ಅವರ ತಾಯಿ ಅಳಲು ತೋಡಿಕೊಂಡಿದ್ದರು.

ಮೂರನೇ ಬಾರಿ, ಸದಾನಂದ ಗೌಡರನ್ನು ಹೇಗಾದರೂ ಕಿತ್ತಾಕಲೇ ಬೇಕೆಂದು ಭೀಷ್ಮ ಪ್ರತಿಜ್ಞೆ ಮಾಡಿದ್ದ ಯಡಿಯೂರಪ್ಪ, ಕನಿಷ್ಠ ತಾವಾಗಲಿಲ್ಲದಿದ್ದರೂ ಶೆಟ್ಟರ್ ಅವರನ್ನು ಮುಂದೆ ನಿಲ್ಲಿಸಿಕೊಂಡು ರಾಜ್ಯಭಾರ ನಡೆಸಬೇಕೆಂದು ಬಿಜೆಪಿ ವಿರುದ್ಧ ಯುದ್ಧ ಸಾರಿದ್ದರು. ಈ ಯುದ್ಧದಲ್ಲಿ ಯಡಿಯೂರಪ್ಪ ಜೊತೆಗೆ ಶೆಟ್ಟರ್ ಕೂಡ ಬಲಿಯಾಗಬೇಕಾಯಿತು. ಯಡಿಯೂರಪ್ಪ ಅವರ ಮನವಿಗೆ ಹೈಕಮಾಂಡ್ ಕ್ಯಾರೆ ಅಂದಿಲ್ಲ. ಗರಿಗರಿ ಅಂಗಿ ಚ್ವಣ್ಣ ಹೊಲಿಸಿಕೊಂಡು ರೆಡಿಯಾಗಿದ್ದ ಶೆಟ್ಟರ್ ಮತ್ತೆ ಹುಬ್ಬಳ್ಳಿಯತ್ತ ಮುಖ ಮಾಡುವಂತಾಗಿದೆ.

English summary
Jagadish Shettar, Hubballi rural MLA, is one of the most tragic politician Karnataka has ever witnessed. The chief minister post has eluded him at least 3 times, ever since he became minister in South India's first BJP government. He is nothing less than tregic king of Karnataka politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X