ಬಿಎಸ್ವೈ, ಅರುಣಾದೇವಿ ವಿರುದ್ಧ ಎಫ್ಐಆರ್ ದಾಖಲು
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 120(ಬಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13(1)(ಡಿ) ಅಡಿಗಳಲ್ಲಿ ವಂಚನೆ ಮಾಡಿದ ಮತ್ತು ನಿವೇಶನ ಪಡೆಯಲು ಸಂಚು ಹೂಡಿದ ಆರೋಪದ ಮೇಲೆ ಕೇಸನ್ನು ಹಾಕಲಾಗಿದೆ. ಪತ್ರಕರ್ತರ ಕೋಟಾದಡಿ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿರುವ ಶಿವಶಂಕರ, ಮಂಜುನಾಥ, ಕೃಷ್ಣ ಮತ್ತು ಸಂದೇಶ ಗೌಡ ಅವರ ಹೆಸರಿನಲ್ಲಿ ಅರುಣಾ ಅವರು ನಿವೇಶನ ಪಡೆದಿದ್ದರು ಎಂದು ವಕೀಲ ವಿನೋದ್ ಎಂಬುವವರು ಈ ದೂರನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು.
ಈ ನಾಲ್ವರು ಪತ್ರಕರ್ತರು ಎಂದು ಅಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕರ್ನಾಟಕ ಗೃಹ ಮಂಡಳಿಗೆ ಶಿಫಾರಸು ಪತ್ರ ಸಲ್ಲಿಸಿದ್ದರು ಎಂದು ದೂರಲಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಮೊದಲನೇ ಆರೋಪಿಯಾದರೆ, ಅವರ ಮಗಳು ಅರುಣಾದೇವಿ ಎರಡನೇ ಆರೋಪಿಯಾಗಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಕೆಎಚ್ಬಿ ಆಯುಕ್ತ ದ್ಯಾಬೇರಿ ಅವರೂ ಆರೋಪಿಯಾಗಿದ್ದಾರೆ.
ದೂರನ್ನು ದಾಖಲಿಸಿಕೊಂಡಿದ್ದ ನ್ಯಾಯಮೂರ್ತಿ ಮಹಾಲಕ್ಷ್ಮಿ ನೇರಳೆ ಅವರು, ತನಿಖೆ ನಡೆಸಿ ಮಾರ್ಚ್ 14ರೊಳಗೆ ವರದಿಯನ್ನು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಅಧಿಕಾರವನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿರುವ ಹಂತದಲ್ಲಿಯೇ ಎಫ್ಐಆರ್ ದಾಖಲಾಗಿರುವುದು ಬೇಸಿಗೆಯಲ್ಲೂ ಬರಸಿಡಿಲು ಬಡಿದಂತಾಗಿದೆ.