ಯಡ್ಡಿ ಪರ ದಿಲ್ಲಿಯಲ್ಲಿ ಶೋಭಾ ಮೇಡಂ 'ಶಕ್ತಿ ಪ್ರದರ್ಶನ'
ಇಲ್ಲೇನೂ ತನ್ನ ಆಟ ಹೆಚ್ಚಿಗೆ ನಡೆಯದೆಂದು ಆಗಾಗ ದಿಲ್ಲಿ ಯಾತ್ರೆ ಕೈಗೊಳ್ಳುವ ಶೋಭಾ ಮೇಡಂ ಪಕ್ಷದ ವರಿಷ್ಠರ ಬಳಿ ಯಜಮಾನ್ ಯಡಿಯೂರಪ್ಪನವರ ಪರ ವಕಾಲತ್ತು ವಹಿಸುತ್ತಾ ಬಂದಿದ್ದಾರೆ. ಅವರಿಗೆ ದಿಲ್ಲಿಯಲ್ಲಿ ಕಾಯಂ ಆಗಿ ಸಾಥ್ ನೀಡುತ್ತಿರುವವರು ಯಡಿಯೂರಪ್ಪನವರ ಮತ್ತೊಬ್ಬ ಆತ್ಮೀಯ ಧನಂಜಯ್ ಕುಮಾರ್.
ಇತ್ತ ಬೆಂಗಳೂರಿನಲ್ಲಿ ಯಡಿಯೂರಪ್ಪ ನಿರ್ಣಾಯಕ ಸಭೆ ಆಯೋಜಿಸಿರುವ ಸಂದರ್ಭದಲ್ಲೇ ಶೋಭಾ ಎರಡು ದಿನಗಳಿಂದ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬಂದಿರುವ ಸರಕಾರಿ ಕೆಲಸಕ್ಕೆಂದು ಅವರು ಎಷ್ಟೇ ಹೇಳಿಕೊಂಡರೂ ಅದು ಸ್ವಾಮಿ ಕಾರ್ಯ, ಸ್ವಕಾರ್ಯ ಎರಡೂ ನೆರವೇರಲಿ ಎಂದು ಅವರು ಚಡಪಡಿಸುತ್ತಿರುವುದು ದೃಗ್ಗೋಚರವಾಗಿದೆ.
ಮೂಲಗಳ ಪ್ರಕಾರ ಅವರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಯಡಿಯೂರಪ್ಪಗೆ ಮಣೆ ಹಾಕದಿದ್ದಲ್ಲಿ ಅವರು ತೆಗೆದುಕೊಳ್ಳಬಹುದಾದ 'extreme step' ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪಗೆ ಮಣೆ ಹಾಕದೆ ಏನೂ ಆಗೇ ಇಲ್ಲ ಎಂಬಂತೆ ಸೌಹಾರ್ದಯುತ ಸಭೆಯನ್ನಾಗಿ ಪರಿವರ್ತಿಸಲು ಹೈಕಮಾಂಡ್ ಪ್ರಯತ್ನಿಸಿದರೆ ನಿಂತ ನಿಲುವಿನಲ್ಲೇ ಯಜಮಾನ್ ಯಡಿಯೂರಪ್ಪನವರು 'ಶಕ್ತಿ' ಪ್ರದರ್ಶನ ಮಾಡುವುದು ಗ್ಯಾರಂಟಿ ಎಂದು ಶಕ್ತಿ ಸಚಿವೆ ಶೋಭಾ ವರಿಷ್ಠರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.