ಬಿಜೆಪಿ ಉಳಿವಿಗಾಗಿ ಯಡಿಯೂರಪ್ಪ ಸಿಎಂ ಆಗಬೇಕು
ಆದರೆ ಇದಕ್ಕೆಲ್ಲ ತಾನು ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಸಿಎಂ ಸದಾನಂದಗೌಡರು ಮಂಗಳೂರಿನತ್ತ (ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು) ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮುನ್ನ, ಯಡಿಯೂರಪ್ಪನವರ ರೇಸ್ ಕೋರ್ಟ್ ನಿವಾಸಕ್ಕೆ ಇದೀಗ ತಾನೆ 5 ನಿಮಿಷಗಳ ಕಾಲ ಭೇಟಿ ನೀಡಿದ್ದ ಸದಾನಂದಗೌಡರು ತಾವು ಕರೆದಿರುವ (ಯಡಿಯೂರಪ್ಪ) ಭೋಜನಕೂಟ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು ಎಂದು ಹೇಳಿ ವಾಪಸ್ಸಾಗಿದ್ದಾರೆ.
ಇದೇ ವೇಳೆ, ಇನ್ನೇನು ಯಡಿಯೂರಪ್ಪ ಆಯೋಜಿಸಿರುವ ಭೂರಿ ಭೋಜನ ಮೆಲ್ಲಲು ಯಡಿಯೂರಪ್ಪ ಬಣದ ನಾಯಕರು ಜಮೆಯಾಗುತ್ತಿದ್ದಾರೆ. 'ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭೋಜನಕೂಟ ಸಭೆ ಆಯೋಜಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಬಗ್ಗೆ ಭೋಜನಕೂಟದ ವೇಳೆ ಚರ್ಚೆಯಾಗಲಿದೆ' ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಅವರು ಏನನ್ನೂ ಹೇಳಲಿಲ್ಲ.
ಜತೆಗೆ, 'ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಶುಕ್ರವಾರ ಮತ್ತು ಶನಿವಾರ ಚಿಂತನ ಮಂಥನ ಸಭೆ ನಡೆಸಲಿದ್ದಾರೆ. ಸಣ್ಣಪುಟ್ಟ ಗೊಂದಲ ನಿವಾರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಅವರು ಕೈಗೊಳ್ಳುವ ತೀರ್ಮಾನವೇ ಅಂತಿಮ' ಎಂದೂ ಈಶ್ವರಪ್ಪ ತಿಳಿಸಿದ್ದಾರೆ.
ಇನ್ನು, ಅಧ್ಯಕ್ಷ ಮಹೋದಯ್ ನಿತಿನ್ ಗಡ್ಕರಿ ಬರುತ್ತಿರುವುದು ಪಕ್ಷದ ಅಧಿಕೃತ ಕಾರ್ಯಕ್ರಮಕ್ಕೇ (ಚಿಂತನ ಮಂಥನ ಸಭೆ) ಹೊರತು ಯಡ್ಡಿ ಆಯೋಜಿಸಿರುವ ಭೋಜನ ಕೂಟಕ್ಕಾಗಲಿ ಅಥವಾ ಅವರ ಹುಟ್ಟುಹಬ್ಬಕ್ಕೆ ಆಗಲಿ ಅಲ್ಲ. ಜತೆಗೆ ಉತ್ತರ ಪ್ರದೇಶ ಚುನಾವಣೆ ಮಗಿಯುವವರೆಗೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದು ರಾಷ್ಟ್ರೀಯ ವರಿಷ್ಠರು ನಿತಿನ್ ಗಡ್ಕರಿ ಮೂಲಕ ತಮ್ಮ ನಿರ್ಧಾರವನ್ನು ಪುನರುಚ್ಚರಿಸಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಇಂದಿನ ಬೆಳವಣಿಗೆಗಳು ಬಿರುಗಾಳಿ ಎಬ್ಬಿಸುವುದು ಸ್ಪಷ್ಟವಾಗಿದೆ.