ಲೂಟಿ ಹೊಡೆಯುತ್ತಿರುವ ಶಾಲೆಗಳಿಗೆ ಸರಕಾರದ ಮೂಗುದಾಣ

ಇದು ಕರ್ನಾಟಕ ಶಿಕ್ಷಣ ಮಂಡಳಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕಳಿಸಿರುವ ಸುತ್ತೋಲೆ. ಈ ಸುತ್ತೋಲೆ, ಮಕ್ಕಳ ಶಿಕ್ಷಣಕ್ಕಾಗಿ ಸಾವಿರಾರುಗಟ್ಟಲೆ ಹಣ ಸುರಿಯುತ್ತಿರುವ ತಂದೆ ತಾಯಿಯರಲ್ಲಿ ಸಂತಸ ತಂದಿದ್ದರೆ, ಶಾಲಾ ಆಡಳಿತ ವರ್ಗ ಬುಸುಗುಡುವಂತೆ ಮಾಡಿದೆ. ಜೊತೆಗೆ ಇದು ಜಾರಿಯಾಗುವುದೇ ಎಂಬ ಅನುಮಾನವೂ ಕಾಡುತ್ತಿದೆ.
ಪಾಲಕರ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಅಡಿಗ ಮಾಡಿದ ಹೋರಾಟದ ಫಲವಾಗಿ ಅಗತ್ಯಕ್ಕೂ ಮೀರಿ ಹಣ ಕೀಳುತ್ತಿರುವ ಶಾಲೆಗಳಿಗೆ ಡಸ್ಟರ್ನಿಂದ, ಬೆತ್ತದಿಂದ ರಪರಪನೆ ಬಾರಿಸಿದಂತಾಗಿದೆ. ಶಾಲೆಗಳೆಂದರೆ ಬರೀ ಓದುವುದು ಬರೆಯುವುದಲ್ಲ, ಮಕ್ಕಳಿಗೆ ಲೈಬ್ರರಿ, ಪ್ರಯೋಗಾಲಯ, ಕ್ರೀಡೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಜಿಎಸ್ ಶರ್ಮಾ ಕಿಡಿಕಾರಿದ್ದಾರೆ.
ಶಾಲೆಗಳನ್ನು ಹದ್ದುಬಸ್ತಿನಲ್ಲಿಡಲು ಈ ಕ್ರಮ ಅಗತ್ಯವಿದೆ ಎಂದು ಸರಕಾರ ಹೇಳುತ್ತಿದ್ದರೆ, ತಾವು ಕಾನೂನು ಯುದ್ಧ ನಡೆಸುವುದಾಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಮುಂದಿನ ವಾರ ಶಾಲೆಗಳು ಕಾನೂನು ಮೆಟ್ಟಲೇರಲಿವೆ. ಸರಕಾರಕ್ಕೆ ಸಲ್ಲಿಸಲಾಗಿರುವ ವರದಿಯ ಪ್ರಕಾರ, ಶಾಲೆಗಳು ಶೇ.100ಕ್ಕೂ ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ. ಪುಸ್ತಕ, ಸಮವಸ್ತ್ರ, ಬ್ಯಾಗ್, ಪಾದರಕ್ಷೆಗಳ ಹೆಸರಿನಲ್ಲಿ ಪಾಲಕರ ರೊಕ್ಕವನ್ನು ಲೂಟಿ ಹೊಡೆಯುತ್ತಿವೆ.












Click it and Unblock the Notifications