ರಾಜ್ಯಪಾಲರ ವಿರುದ್ಧ ಶಾಸಕ ಬೇಳೂರು ಪ್ರತಿಭಟನೆ
ರಾಜ್ಯಪಾಲ ಎಚ್ ಆರ್ ಭಾರದ್ವಜ್ ಅವರು ವಿಧಾನಸಭೆ ಸಭಾಂಗಣ ಪ್ರವೇಶಿಸುತ್ತಿದ್ದಂತೆ ಗೋಪಾಲಕೃಷ್ಣ ಎದ್ದು ನಿಂತು ಫಲಕ ಪ್ರದರ್ಶಿಸಿದರು. ರಾಜ್ಯಪಾಲರ ವಿರುದ್ಧ ಧಿಕ್ಕಾರ ಫಲಕದಲ್ಲಿ 'ಧಿಕ್ಕಾರ ಧಿಕ್ಕಾರ ರಾಜ್ಯಪಾಲರಿಗೆ ಧಿಕ್ಕಾರ..ಸುಪ್ರೀಂಕೋರ್ಟ್ ರ್ತೀರ್ಪಿನ ಅನ್ವಯ ಅರ್ಹ ಶಾಸಕರಾಗಿ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳಿದಾಗ ಪ್ರವೇಶವನ್ನು ನಿರಾಕರಿಸಿದ ರಾಜ್ಯಪಾಲರಿಗೆ ಧಿಕ್ಕಾರ' ಎಂದು ಬರೆಯಲಾಗಿತ್ತು.
ನಂತರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಗೈರು ಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.
ರಾಜ್ಯಪಾಲರು ಮಾತ್ರ ತಮ್ಮ ಭಾಷಣದಲ್ಲಿ ಸದಾನಂದ ಗೌಡರ ಸರ್ಕಾರವನ್ನು ಹೊಗಳಿ ಅಟ್ಟಕ್ಕೇರಿಸಿಬಿಟ್ಟರು, ಜಲ ಸಮಸ್ಯೆ, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು.