ಬೆಂಗಳೂರಿನಲ್ಲಿ ಯುವತಿ, ವಿದ್ಯಾರ್ಥಿ, ಪ್ರೊಫೆಸರ್ ಆತ್ಮಹತ್ಯೆ
ಬೆಂಗಳೂರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಬಳಿಯಿರುವ ಕೈಕೊಂಡನಹಳ್ಳಿಯಲ್ಲಿರುವ ಅಮೃತ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜಿತೇಂದ್ರ ಕಾಲೇಜಿನ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಜಿತೇಂದ್ರ ಬಿಟೆಕ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ.
ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಇಂದು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಜಿತೇಂದ್ರ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ಆರ್.ಟಿ. ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನುಷ್ಕಾ ಎಂಬ ಯುವತಿಯ ಮದುವೆ ನಿಶ್ಚಿತಾರ್ಥ ಕೂಡ ಮುಗಿದಿತ್ತು. ಆದರೆ, ಗಂಡಿನ ಕಡೆಯವರಿಂದ 3 ಲಕ್ಷ ರು. ವರದಕ್ಷಿಣೆ ಬೇಡಿಕೆ ಬಂದಿತ್ತು. ಇದರಿಂದ ಬೇಸತ್ತ ಆಕೆ ಬದುಕಿಗೆ ಕೊನೆ ಹೇಳಲು ನಿರ್ಧರಿಸಿದಳು.
ಮತ್ತೊಂದು ಘಟನೆಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರೊಫೆಸರಾಗಿದ್ದ ಪರಾಗ್ (52) ಎಂಬುವವರು ಉರುಳು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗುತ್ತಿರುವುದಾಗಿ ಪರಾಗ್ ಅವರು ಪತ್ರ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.