ಮೈಸೂರು: 80ಕ್ಕೂ ಅಧಿಕ ಅಕ್ರಮ ದೇಗುಲಗಳು ನೆಲಸಮ
ದೇಗುಲ ತೆರವು ಕಾರ್ಯಾಚರಣೆ ಸುಪ್ರೀಂಕೋರ್ಟ್ ಆದೇಶದಂತೆ ಡಿ.31, 2011ರೊಳಗೆ ಮುಗಿಯಬೇಕಿತ್ತು. ಆದರೆ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಪಿಎಸ್ ವಸ್ತ್ರದ್ ಹೇಳಿದರು.
ನಗರ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ರ ನೇತೃತ್ವದಲ್ಲಿ ಮುಂಜಾನೆ 4 ಗಂಟೆಗೆ ಆರಂಭಗೊಂಡ ಕಾರ್ಯಾಚರಣೆಯಲ್ಲಿ 20 ಇಂಜಿನಿಯರ್ಗಳು, 9 ಎಕ್ಸವೇಟರ್, 10 ಟಿಪ್ಪರ್, 100 ಮಂದಿ ಗ್ಯಾಂಗ್ ಮೆನ್ ಅಲ್ಲದೆ ಸಾವಿರಾರು ಜನ ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮಹಾದೇವಪುರ ರಸ್ತೆಯಿಂದ ಆರಂಭಗೊಂಡ ಕಾರ್ಯಾಚರಣೆ, ಬಸವೇಶ್ವರ ರಸ್ತೆ, ಮಂಡಿ ಮೊಹಲ್ಲಾ, ವಿಶ್ವಮಾನವ ಜೋಡಿ ರಸ್ತೆ, ಕೆ.ಜಿ.ಕೊಪ್ಪಲು, ಕಾಮಾಕ್ಷಿ ಆಸ್ಪತ್ರೆ ರಸ್ತೆ, ರಾಮಾನುಜಂ ರಸ್ತೆ, ಕುವೆಂಪುನಗರ, ಕುಂಬಾರ ಕೊಪ್ಪಲು ಗೇಟ್, ವಿಜಯನಗರ 2ನೆ ಹಂತ, ಸರಸ್ವತಿಪುರಂ ಮುಂತಾದ ಕಡೆ ನಡೆದಿದೆ. ಅರಳಿ ಕಟ್ಟೆ, ನಾಗರಕಲ್ಲು, ಮಾರಮ್ಮನ ಗುಡಿಗಳನ್ನು ತೆರವುಗೊಳಿಸಲಾಗಿದೆ.
ನಗರದಲ್ಲಿ ಒಟ್ಟು 140 ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಮೊದಲ ದಿನ 80ಕ್ಕೂ ಹೆಚ್ಚು ಕಟ್ಟಡ ತೆರವುಗೊಳಿಸಲಾಗಿದೆ. ಇನ್ನೂ ಒಂದೆರಡು ದಿನ ಈ ಕಾರ್ಯಾಚರಣೆ ಮುಂದುವರೆಯಲಿದೆ.