ಬೆಂಗಳೂರಿನಲ್ಲಿ ಲಸಿಕೆಯಿಲ್ಲದ ಮಾರಣಾಂತಿಕ ಕ್ಷಯ?
ಬೆಂಗಳೂರಿನಲ್ಲಿ ಇದುವರೆಗೆ ಇಬ್ಬರು ಈ ಮಾರಕ ರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ಪ್ರಾಥಮಿಕ ವರದಿಯಿಂದಷ್ಟೇ ತಿಳಿದು ಬಂದಿದೆ. ಇದು ಕ್ಷಯರೋಗದ ಒಂದು ಹಂತ. ಇದು ಅಂದಾಜು ಒಂದು ಲಕ್ಷ ಕ್ಷಯ ರೋಗಿಯಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇರುತ್ತದೆ. ಇದರ ಪತ್ತೆಗೆ ಸುಸಜ್ಜಿತ ಪ್ರಯೋಗಾಲಯ ಬೇಕಾಗಿದ್ದು, ಸದ್ಯ ಇದರ ಪರಿಶೀಲನೆ ಚೆನ್ನೈ ಟಿಬಿ ಸಂಶೋಧನಾ ಕೇಂದ್ರದಲ್ಲಿ ಮಾತ್ರ ಸಾಧ್ಯ ಎಂದು ರಾಜೀವ್ ಗಾಂಧೀ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಶಶಿಧರ್ ಬುಗ್ಗಿ ಹೇಳಿದ್ದಾರೆ.
ಯಾವುದೇ ಲಸಿಕೆಗೆ ಬಗ್ಗದ ಈ ಸೋಂಕಿನ ರೋಗ ಬಂದರೆ ಸಾವೇ ಗತಿ ಎನ್ನಲಾಗುತ್ತದೆ. ಲಸಿಕೆ ಇದ್ದರೂ ಭಾರತದಲ್ಲಿ ಸಾವಿರಾರು ಮಂದಿ ಕ್ಷಯರೋಗಕ್ಕೆ ಬಲಿಯಾಗುತ್ತಿದ್ದಾರೆ. ಈಗ ಲಸಿಕೆಯಿಲ್ಲದ ವಾಸಿ ಮಾಡಲಾಗದ ಈ ಕಾಯಿಲೆಯಿಂದ ಜನರು ಆತಂಕ ಪಡುವಂತಾಗಿದೆ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮುಂಬೈ ನಗರದಲ್ಲೂ ಈ ಸೋಂಕು ಇದೆಯೆಂದು ಹೇಳಲಾಗಿದೆ.
ಸಾಧಾರಣ ಕ್ಷಯರೋಗ ಇರುವ ವ್ಯಕ್ತಿ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಲು ವಿಫಲನಾದರೆ ಯಾವ ಲಸಿಕೆಗೂ ಬಗ್ಗದ ಟಿಡಿಆರ್ ಟಿಬಿ ( Totally Drug Resistant - Tuberculosis) ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಂಬಂಧಪಟ್ಟ ಲಸಿಕೆ ತೆಗೆದುಕೊಂಡ ನಂತರ ರೋಗಿಗೆ ತಾನು ಹುಷಾರಾದ ಅನುಭವವಾದರೆ ಲಸಿಕೆ ತೆಗೆದು ಕೊಳ್ಳುವುದನ್ನು ನಿಲ್ಲಿಸುತ್ತಾನೆ. ಆದರೆ ಆಗ ಆತನ ದೇಹದಲ್ಲಿರುವ ಟಿಬಿ ಕಾರಕ ಕ್ರಿಮಿಗಳು ನಾಶವಾಗಿರುವುದಿಲ್ಲ, ಆಗ ಇಂಥಹ ಮಾರಣಾಂತಿಕ ಕಾಯಿಲೆ ಹರಡುತ್ತದೆ.