ಯಾದಗಿರಿಯಲ್ಲಿ ಖೋಟಾನೋಟು ವಂಚಕನ ಬಂಧನ

ಯಾದಗಿರಿಯ ಕಾಜಗಾರವಾಡಿ ಓಣಿಯ ನಿವಾಸಿ ಮಲ್ಲಿಕಾರ್ಜುನ ಬಸಣಪ್ಪ ಪನ್ನಾಪುರ ಎಂಬಾತನನ್ನು ಬಂಧಿಸಿ ವಿಚಾರಣೆಗಾಗಿ ಹೈದರಾಬಾದ್ಗೆ ಕರೆದೊಯ್ದಿದ್ದಾರೆ. ಭಾರತೀಯ ಖೋಟಾನೋಟು ಜಾಲದ ಪ್ರಮುಖ ಸೂತ್ರಧಾರ ಬಾಂಗ್ಲಾದೇಶದ ಜಾಕೀರ್ ಎಂಬಾತನೊಂದಿಗೆ ನಂಟು ಹೊಂದಿದ್ದಾನೆ ಎಂಬ ಬಲವಾದ ಸಾಕ್ಷ್ಯಾಧಾರಗಳೊಂದಿಗೆ ಆಗಮಿಸಿದ್ದ ತನಿಖಾ ತಂಡ, ಸ್ಥಳೀಯ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿತು.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಭಾರತೀಯ ಖೋಟಾನೋಟು ತಯಾರಿಸಿ, ಹೈದರಾಬಾದ್ ಮೂಲದ ಯುವಕನೋರ್ವನಿಂದ ತನಗೆ 1,000 ರು. ಮತ್ತು 500 ರು. ಮುಖಬೆಲೆಯ ಖೋಟನೋಟುಗಳು ತಲುಪುತ್ತಿವೆ ಎಂದು ಮಲ್ಲಿಕಾರ್ಜುನ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದರು.
ಬಂಧಿತ ಆರೋಪಿ ಯಾದಗಿರಿ ಜಿಲ್ಲೆಯಿಂದ 10 ಕಿ.ಮೀ.ದೂರದಲ್ಲಿರುವ ರಾಮಸಮುದ್ರ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಈತ ಯಾದಗಿರಿ ನಗರದ ಕಾಜಗಾರವಾಡಿ ಏರಿಯಾದಲ್ಲಿ ಬಾಡಿಗೆ ಮನೆಯೊಂದು ಪಡೆದು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ ಎಂದು ನಿವಾಸಿಗಳು ಹೇಳಿದರು.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮಲ್ಲಿಕಾರ್ಜುನ ಮನೆ ಶೋಧನೆ ಮಾಡಿ ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಆತನಿಂದ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್, ಎರಡು ಮೊಬೈಲ್ ಸಿಮ್ಗಳು, ಕೆಲವು ದಾಖಲೆಗಳು, ಮೊಬೈಲ್ ಮತ್ತು ರೈಲು ಟಿಕೆಟ್ಸ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಡಿವೈಎಸ್ಪಿ ಮಹ್ಮದ್ ತಾಜುದ್ದೀನ್ ನುಡಿದರು.












Click it and Unblock the Notifications