ಕುರುಕ್ಷೇತ್ರ, ಕನ್ಯಾಕುಮಾರಿಯಲ್ಲೂ ತಿರುಪತಿ ತಿಮ್ಮಪ್ಪ ಪ್ರತಿಷ್ಠಾಪನೆ

ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (TTD) ಈ ನಿರ್ಧಾರ ತೆಗೆದುಕೊಂಡಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಇತ್ತೀಚೆಗೆ TTD ಮಾಹಿತಿ ಕೇಂದ್ರ ಕಾರ್ಯಾರಂಭಿಸಿದ ಬಳಿಕ ಮಹಾರಾಷ್ಟ್ರ ಅದರಲ್ಲೂ ಮುಂಬೈ ಮಂದಿಗೆ ತಿರುಪತಿ ವೇಂಕಟೇಶ್ವರನ ದರುಶನ, ಆಶೀರ್ವಾದ ಕಲ್ಪಿಸಲು ನವಿ ಮುಂಬೈನಲ್ಲಿ ತಿರುಪತಿ ವೇಂಕಟೇಶ್ವರ ದೇವಸ್ಥಾನದ ಮಾದರಿಯಲ್ಲಿ ಹೊಸ ವೇಂಕಟೇಶ್ವರ ದೇಗುಲ ಸ್ಥಾಪಿಸಲಾಗುವುದು ಎಂದು TTD ತಿಳಿಸಿದೆ.
ಮುಂಬೈನಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸರಕಾರವೇ ಉಚಿತವಾಗಿ ಜಾಗ ನೀಡಲು ಮುಂದಾಗಿದೆ. ಇಲ್ಲವಾದಲ್ಲಿ, ದಕ್ಷಿಣ ಭಾರತದವರು ಹೆಚ್ಚಾಗಿ ನೆಲೆಸಿರುವ ಚೆಂಬೂರಿನಲ್ಲಿ ಖಾಸಗಿ ಜಾಗದಲ್ಲಿ ಈ ದೇವಸ್ಥಾನ ತಲೆಯೆತ್ತಲಿದೆ. ಹಿರಿಯ ನಟಿ ಕಾಂಚನಾ ಕೊಡುಗೆಯಾಗಿ ನೀಡಿರುವ ಜಾಗದಲ್ಲಿ ಚೆನ್ನೈನಲ್ಲಿ ಈಗಾಗಲೇ (ಜಿಎನ್ ಚೆಟ್ಟಿ ರೋಡ್) ಪೂರ್ಣ ಪ್ರಮಾಣದ ವೇಂಕಟೇಶ್ವರ ದೇವಸ್ಥಾನ ತಲೆಯೆತ್ತುತ್ತಿದೆ.
ಕನ್ಯಾಕುಮಾರಿಯಲ್ಲೂ ತಿರುಪತಿ ತಿಮ್ಮಪ್ಪ: ಕನ್ಯಾಕುಮಾರಿಯಲ್ಲೂ ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿರ್ಮಿಸಲು ಆಲೋಚಿಸಲಾಗಿದೆ. ಕಳೆದ ವರ್ಷ ಇಲ್ಲಿನ ದೇವಸ್ಥಾನವೊಂದರಲ್ಲಿ ವೇಂಕಟೇಶ್ವರನಿಗೆ ಕಲ್ಯಾಣೋತ್ಸವ ನೆರವೇರಿಸಲಾಗಿತ್ತು. ಇದರಿಂದ ಪ್ರೇರಿತರಾದ ತಿಮ್ಮಪ್ಪನ ಅಸಂಖ್ಯಾತ ಭಕ್ತರು ತಿರುಪತಿ ಮಾದರಿಯಲ್ಲಿ ಇಲ್ಲೂ ಒಂದು ವೇಂಕಟೇಶ್ವರ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನು ಹರಿಯಾಣಾದ ಕುರುಕ್ಷೇತ್ರದಲ್ಲೂ ತಿರುಪತಿ ತಿಮ್ಮಪ್ಪನ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಹಾಗೆಯೇ, ದೆಹಲಿಯ ಗೋಲ್ ಮಾರ್ಕೆಟ್ ಬಳಿ ಇಂತಹುದೇ ಮಂದಿರ ನಿರ್ಮಿಸುವ ಪ್ರಸ್ತಾವನೆ ಇದೆ ಎಂದು TTD Executive Officer ಎಲ್ ವಿ ಸುಮ್ರಮಣ್ಯಂ ಹೇಳಿದ್ದಾರೆ.












Click it and Unblock the Notifications