ಡಿ.27ರಿಂದ ಅಣ್ಣಾ ಉಪವಾಸ, 30ರಿಂದ ಜೈಲ್ ಭರೋ

ಅಣ್ಣಾ ಹಜಾರೆ ಅವರ ಬೇಡಿಕೆಗೆ ಮಣಿಯಬಾರದು ಎಂದು ನಿರ್ಧರಿಸಿರುವ ಕೇಂದ್ರ ಸರಕಾರದ ಸಚಿವರುಗಳಾದ ಗೃಹ ಸಚಿವ ಪಿ.ಚಿದಂಬರಂ, ಕಾನೂನು ಸಚಿವ ಸಲ್ಮಾನ್ ಖುರ್ಷೀದ್ ಮತ್ತು ಟೆಲಿಕಾಂ ಸಚಿವ ಕಪಿಲ್ ಸಿಬಾಲ್ ಅವರಿದ್ದ ಹಿರಿಯ ನಾಯಕರ ತಂಡ ಶಿಫಾರಸುಗಳನ್ನು ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಕಳಿಸಿದೆ.
ಇದರಿಂದಾಗಿ, ಯಾವುದೇ ಕಾರಣಕ್ಕೂ ಸಿಬಿಐ ಅನ್ನು ಲೋಕಪಾಲ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲು ಬಿಡಬಾರದು ಎಂದು ವಾದಿಸುತ್ತಿದ್ದ ಅಣ್ಣಾ ಟೀಂಗೆ ಭಾರೀ ನಿರಾಶೆಯಾಗಿದೆ. ಕೇಂದ್ರ ಸೆಡ್ಡು ಹೊಡೆಯಲು ನಿರ್ಧರಿಸಿರುವ ಅಣ್ಣಾ ಹಜಾರೆ, ತನ್ನಿಷ್ಟದಂತೆ ವರ್ತಿಸುತ್ತಿರುವ ಕೇಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇನೆ ಎಂದು ಗರ್ಜಿಸಿದ್ದಾರೆ.
ಜೈಲ್ ಭರೋ ಚಳವಳಿ : ಡಿ.27ರಿಂದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸುರುವ ಅಣ್ಣಾ, ಡಿ.30ರಿಂದ ದೇಶದಾದ್ಯಂತ 'ಜೈಲ್ ಭರೋ' ಚಳವಳಿ ಆರಂಭಿಸುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಜೈಲ್ ಭರೋ ಚಳವಳಿಯ ನಂತರ ಚುನಾವಣೆಗೆ ಸಿದ್ಧತೆ ನಡೆಸಿರುವ ಐದು ರಾಜ್ಯಗಳಲ್ಲಿ ಜನ ಲೋಕಪಾಲ ಮಸೂದೆಗಾಗಿ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಡಿ.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಭೆಯಲ್ಲಿ ಅಣ್ಣಾ ಹಜಾರೆ, ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸಿಬಿಐಯನ್ನು ಜನ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ತರಲೇಬೇಕೆಂದು ಭಾಷಣಗಳಲ್ಲಿ ನುಡಿದಿದ್ದರು. ಡಿ.27ರಂದು ಅಧಿವೇಶನದಲ್ಲಿ ಲೋಕಪಾಲ ಮಸೂದೆಯ ಮಂಡನೆಯಾಗುವ ಸಾಧ್ಯತೆಯಿದೆ.












Click it and Unblock the Notifications