ಲೋಕಾಯುಕ್ತ ತನ್ನಿ, ಇಲ್ಲ ಮನೆಗೆ ಹೋಗಿ : ನ್ಯಾ. ಹೆಗ್ಡೆ

ಲೋಕಾಯುಕ್ತ ಸಂಸ್ಥೆ ಆರಂಭವಾದಾಗಿನಿಂದ ಎಲ್ಲ ಸರಿಯಾಗಿಯೇ ನಡೆದುಕೊಂಡು ಬಂದಿದೆ. ಆದರೆ, ಸರಕಾರವೇ ಈ ಸಂಸ್ಥೆಯನ್ನು ತಲೆಯಿಲ್ಲದ ಸಂಸ್ಥೆಯನ್ನಾಗಿ ಮಾಡಿದೆ. ಲೋಕಾಯುಕ್ತ ಇದ್ದರೆ ಜನತೆಗೆ ಎಂದೂ ಅನ್ಯಾಯವಾಗುವುದಿಲ್ಲ. ಲೋಕಾಯುಕ್ತ ನೇಮಕಕ್ಕಾಗಿ ನಾವೆಲ್ಲ ಸೇರಿ ಹೋರಾಟ ನಡೆಸಬೇಕಿದೆ. ನಾನು ನಿಮ್ಮ ಜೊತೆಗಿದ್ದೇನೆ ಎಂದು ಮಾಜಿ ಲೋಕಾಯುಕ್ತ ಜನತೆಯಲ್ಲಿ ಹುಮ್ಮಸ್ಸು ತುಂಬಿದರು.
ಸರಕಾರಕ್ಕೆ ಅಕ್ರಮ ಗಣಿಗಾರಿಕೆ ವರದಿ ಸಲ್ಲಿಸಿದ ಮೇಲೆ ಆಂಧ್ರ ಮತ್ತು ಗೋವಾ ಸರಕಾರಗಳು ಅಕ್ರಮ ತಡೆಯಲು ಕ್ರಮ ತೆಗೆದುಕೊಂಡಿದೆ. ಆದರೆ, ಕರ್ನಾಟಕ ಸರಕಾರಕ್ಕೆ ವರದಿಯಿರಲಿ ಲೋಕಾಯುಕ್ತ ಸಂಸ್ಥೆಯೇ ಬೇಕಾಗಿಲ್ಲ. ಅದಕ್ಕೆ ವರದಿಯೂ ಬೇಕಾಗಿಲ್ಲ, ತಿರಸ್ಕರಿಸುವ ಧೈರ್ಯವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸರಕಾರ ಕೂಡಲೆ ಲೋಕಾಯುಕ್ತರನ್ನು ನೇಮಕ ಮಾಡಲಿ ಇಲ್ಲ ಮನೆಗೆ ತೊಲಗಲಿ ಎಂದು ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ದೊರೆಸ್ವಾಮಿಯಂತೆ ಯಡಿಯೂರಪ್ಪನವರನ್ನು ಮಾತಿನ ಗುರಿಯಾಗಿಸಿಕೊಂಡ ಹೆಗ್ಡೆಯವರು, ಯಡಿಯೂರಪ್ಪನವರು ತಮ್ಮಿಂದಲೇ ಜೈಲಿಗೆ ಹೋಗಿದ್ದು ಎಂದು ಎಲ್ಲೆಡೆಯೂ ಹೇಳಿಕೊಳ್ಳುತ್ತಿದ್ದಾರೆ. ಅಸಲಿಗೆ, ಅವರು ಜೈಲಿಗೆ ಹೋಗಿದ್ದು ಗಣಿಗಾರಿಕೆ ವರದಿಯಿಂದಲ್ಲ, ಖಾಸಗಿ ಕಂಪ್ಲೇಂಟಿನಿಂದ. ನನ್ನ ವರದಿಯಿಂದ ಯಾರಾದರೂ ಜೈಲಿಗೆ ಹೋದರೆ ಇಷ್ಟು ಬೇಗನೆ ಹೊರಬರಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಲೋಕಾಯುಕ್ತ ಸಂಸ್ಥೆ ತ್ಯಜಿಸಿದ ನಂತರ ಅನೇಕ ರಾಜಕಾರಣಿಗಳು, ನನಗೆ ಹಣ ಎಲ್ಲೆಲ್ಲಿಂದ ಬಂತು ಎಂದೆಲ್ಲಾ ನನ್ನ ಬಗ್ಗೆ ನಾನಾ ಮಾತಾಡಿಕೊಂಡರು. ನಾನೂ ಭ್ರಷ್ಟ ಅಂತ ಹಣೆಪಟ್ಟಿ ಕಟ್ಟಿದರು. ಆದರೆ, ಇಂದು ಸ್ವತಃ ಅಣ್ಣಾ ಹಜಾರೆ ಅವರು ಮತ್ತು ಅಣ್ಣಾ ತಂಡದವರು ಸಹಿ ಮಾಡಿರುವ ನೆನಪಿನ ಕಾಣಿಕೆ ನೀಡಿದ್ದಾರೆ. ಇದೇ ನನ್ನ ಬಗ್ಗೆ ಸಲ್ಲದ ಮಾತಾಡಿದವರಿಗೆ ತಕ್ಕ ಉತ್ತರ ಎಂದು ನುಡಿದರು.












Click it and Unblock the Notifications