ಮಡೆಸ್ನಾನ ನಿಷೇಧಿಸುವ ಮಾತೇ ಇಲ್ಲ: ರಾಜ್ಯ ಸರಕಾರ
'ಧಾರ್ಮಿಕ ನಂಬಿಕೆಗಳು ಸೂಕ್ಷ್ಮ ವಿಷಯಗಳಾಗಿದ್ದು, ಅವುಗಳ ಮೇಲೆ ಬಲವಂತವಾಗಿ ನಿರ್ಬಂಧ ಹೇರುವುದು ತರವಲ್ಲ. ಆದ್ದರಿಂದ, ಮಡೆಸ್ನಾನವನ್ನು ನಿಷೇಧಿಸುವ ನಿಟ್ಟಿನಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಆಚರಿಸುತ್ತಿರುವ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವ ಕುರಿತು ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕಿ ಮೋಟಮ್ಮ ಅವರು ಸೋಮವಾರ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಹೀಗೆ ಉತ್ತರಿಸಿದರು.
'ದೊಡ್ಡ ಜನಸಮೂಹವು ಮಡೆಸ್ನಾನವನ್ನು ನಂಬುತ್ತಿದೆ. ಜತಗೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದನ್ನು ಸಂವಿಧಾನದಲ್ಲೇ ನಿಷೇಧಿಸಲಾಗಿದೆ. ಆದ್ದರಿಂದ, ಏಕಾಏಕಿ ಈ ಪದ್ಧತಿಯನ್ನು ನಿಷೇಧಿಸುವ ಬದಲು ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು, ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ನಡೆಸಿ, ಸಾಮಾಜಿಕ ಪಿಡುಗುಗಳನ್ನು ನಿವಾರಿಸಬೇಕಾಗಿದೆ' ಎಂದು ಆಚಾರ್ಯ ಸೂಚ್ಯವಾಗಿ ತಿಳಿಸಿದರು.
ಈ ಪದ್ಧತಿ ಬಗ್ಗೆ ಇನ್ನು ನಾಲ್ಕೇ ದಿನಗಳಲ್ಲಿ ಸಮಗ್ರ ವರದಿ ತರಿಸಿಕೊಂಡು ನಿಷೇಧ ಹೇರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಮೊನ್ನೆಯಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.