ಕೆರೆ ನುಂಗಿದ ಸಭಾಪತಿ ಬೋಪಯ್ಯ ಮೇಲೆ ಕೇಸ್
ಸಭಾಪತಿ ಬೋಪಯ್ಯ ಅವರ ಮೇಲೆ ಕೆರೆಗೆ ಮೀಸಲಾಗಿದ್ದ ಭೂಮಿಯನ್ನು ನುಂಗಿದ ಆರೋಪ ಮಾಡಲಾಗಿದೆ. ಸುಮಾರು 40 ಲಕ್ಷ ರೂ ಅವ್ಯವಹಾರದಲ್ಲಿ ಬೋಪಯ್ಯ ಅವರನ್ನು ಆರೋಪಿಯಾಗಿ ಪರಿಗಣಿಸುವಂತೆ ಸರಿತಾ ಪೂಣಚ್ಚ ಎಂಬುವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.
2006-07ರಲ್ಲಿ ನಡೆದಿರುವ ಈ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಡಿಎಸ್ಪಿ ಸಿಕೆ ಶಶಿಧರ್ ಅವರು ವಂಚನೆ ಆರೋಪದಡಿಯಲ್ಲಿ 420ಕೇಸ್ ದಾಖಲಿಸಿಕೊಂಡು ಎಫ್ಐಅರ್ ಹಾಕಿದ್ದಾರೆ.
ವಿರಾಜ್ ಪೇಟೆ ಕ್ಷೇತ್ರದ ಬೋಪಯ್ಯ ಹಾಗೂ ಮೂವರು ಅಧಿಕಾರಗಳ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಜಿಲ್ಲಾ ಮತ್ತು ಸೆಷನ್ ಹಾಗೂ ಭ್ರಷ್ಟಾಚಾರ ವಿರೋಧಿ ವಿಶೇಷ ನ್ಯಾಯಾಲಯದ ನ್ಯಾ. ಅಶೋಕ್ ನಿಜಗಣ್ಣನವರ್ ಅವರು ಕಾಂಗ್ರೆಸ್ ಜಿಲ್ಲಾ ಪರಿಷತ್ ಸದಸ್ಯೆ ಸರಿತಾ ಪೂಣಚ ಅವರು ಸಲ್ಲಿಸಿದ್ದ ದೂರು ಅರ್ಜಿಯ ವಿಚಾರನೆ ನಡೆಸಿ, ಪ್ರಕರಣ ದಾಖಲಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.
ಬೋಪಯ್ಯ ಅವರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಎನ್ ರಾಜಾರಾವ್, ನಿರ್ಮಿತಿ ಸೆಂಟರ್ ಪ್ರಾಜೆಕ್ಟ್ ನಿರ್ದೇಶಕ ಯೋಗಾ ನರಸಿಂಗ, ಜಿಲ್ಲಾ ಪಂಚಾಯತ್ ಸಿಇಒ ಕೃಷ್ಣಪ್ಪ ಅವರನ್ನು ಸಹ ಆರೋಪಿಗಳಾಗಿ ಹೆಸರಿಸಲಾಗಿದೆ.
ಕೆರೆ ನಿರ್ಮಾಣ ಮತ್ತು ಪುನರ್ವಸತಿ ಯೋಜನೆಯಡಿಯಲ್ಲಿ ಮಂಜೂರಾದ 1.2 ಕೋಟಿ ರು ನಲ್ಲಿ 40 ಲಕ್ಷ ರೂ ನುಂಗಲಾಗಿದೆ. ತಿತಿಮತಿ ಅರಣ್ಯ ಪ್ರದೇಶದ ರೇಷ್ಮೆ ಹಡ್ಲು ಪ್ರದೇಶಕ್ಕೆ ಸೇರಿದ ಯೋಜನೆ ಇದಾಗಿದ್ದು, ಬೋಪಯ್ಯ ಅವರು ಶಾಸಕರಾಗಿದ್ದಾಗ ಈ ಅಕ್ರಮ ಎಸೆಗಿದ್ದಾರೆ.