ಬಳ್ಳಾರಿ ಒಡೆದು ರಾಯಲಸೀಮೆ ರಾಜ್ಯ ಕಟ್ಟಲು ಸ್ಕೆಚ್

ಪೂರ್ವ ಯೋಜನೆಯಂತೆ ಶ್ರೀರಾಮುಲು ಬಳ್ಳಾರಿ ಉಪ ಚುನಾವಣೆ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆಗೆ ಸಜ್ಜಾಗುತ್ತಿದ್ದಾರೆ. ಇತ್ತ ಜೈಲಿನಲ್ಲೇ ಕೂತು ಸ್ಕೆಚ್ ಹಾಕುತ್ತಿರುವ ಗಾಲಿ ರೆಡ್ಡಿ, ಜಗನ್ ಜೊತೆ ಸೇರಿ ಪ್ರತ್ಯೇಕ ರಾಯಲಸೀಮೆ ರಾಜ್ಯಕ್ಕೆ ಆಗ್ರಹಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಕಾಲದಿಂದಲೂ ಕಡಪ, ಅನಂತಪುರ ಭಾಗದಲ್ಲಿ ಹಿಡಿತ ಸಾಧಿಸಿಕೊಂಡು ಬಂದಿರುವ ವೈಎಸ್ ಆರ್ ಕುಟುಂಬ ಈ ಮಹತ್ವದ ಯೋಜನೆಗೆ ನೀಲನಕ್ಷೆ ತಯಾರಿಸುತ್ತಿದೆ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ತೆಲಂಗಾಣ ರಾಜ್ಯ ಸ್ಥಾಪನೆಗೂ ಮೊದಲು ರಾಯಲ ಸೀಮೆ ರಾಜ್ಯಕ್ಕೆ ಆಗ್ರಹಿಸುವ ಸಾಧ್ಯತೆಯಿದೆ. ಇದರಲ್ಲಿ ಆತಂಕಕಾರಿ ವಿಷಯ ಎಂದರೆ, ರಾಯಲಸೀಮೆಯ ಸಂಸ್ಕೃತಿಯನ್ನೇ ಹೋಲುವ ಬಳ್ಳಾರಿಯನ್ನೂ ಕೂಡಾ ಹೊಸ ರಾಜ್ಯಕ್ಕೆ ಸೇರಿಸಲು ಗಾಲಿ ರೆಡ್ಡಿ ಚಿಂತನೆ ನಡೆಸಿದ್ದಾರಂತೆ.
ಆಂಧ್ರಪ್ರದೇಶದ ನಾಲ್ಕು ಜಿಲ್ಲೆಗಳು ಹಾಗೂ ಬಳ್ಳಾರಿಯ ಬಹುತೇಕ ತಾಲೂಕುಗಳು ರಾಯಲಸೀಮೆ ಭಾಗವಾಗುವ ಸಾಧ್ಯವಿದೆ. ಸಿಬಿಐ ಕುಣಿಕೆಯಿಂದ ರಕ್ಷಣೆ ಪಡೆಯಲು ಹಾಗೂ ರಿಪಬ್ಲಿಕ್ ಆಫ್ ಬಳ್ಳಾರಿಯಲ್ಲಿ ಅಳಿದುಳಿದಿರುವ ಸಂಪತ್ತನ್ನು ಕಾಯ್ದುಕೊಳ್ಳಲು ಜಗನ್ ಹೇಳಿದಂತೆ ಕೇಳುವಂತೆ ಗಾಲಿ ರೆಡ್ಡಿ ತನ್ನ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.
ರಾಜಕೀಯವಾಗಿಯೂ ಬಳ್ಳಾರಿಯನ್ನು ಬಿಜೆಪಿ ಕೈಯಿಂದ ಕಿತ್ತುಕೊಂಡಿರುವ ರೆಡ್ಡಿ ಸೋದರರು ಮಾಡಿರುವ ಹೊಸ ಪ್ಲ್ಯಾನ್ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಚಿತ್ರಣವನ್ನೇ ಬದಲಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications