ಸಾಮೂಹಿಕ ಆತ್ಮಹತ್ಯೆಗೆ ಶರಣಾದ ವೈದ್ಯರ ಕುಟುಂಬ
ಸಾಲ ಬಾಧೆ ತಾಳಲಾರದೆ ವೈದ್ಯರ ಕುಟುಂಬದ ಎಲ್ಲ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ವಾಲ್ಮಿಕಿನಗರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಬಡಬಗ್ಗರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ.
ಆತ್ಮಹತ್ಯೆಗೆ ಶರಣಾದವರನ್ನು ಡಾ. ಅಮಾನುಲ್ಲಾ ಖಾನ್(60), ಅವರ ಹೆಂಡತಿ ಡಾ. ನವೀದಾಬಾನು(50), ಮಕ್ಕಳಾದ ಡಾ.ಮೊಹಮ್ಮದ್ ಇಹ್ತೆಶಾನ್ ರಶೀದ್(28) ಮತ್ತು ಮೊಹಮ್ಮದ್ ಅಹ್ಸಾಮ್ ರಶೀದ್(26) ಎಂದು ಗುರುತಿಸಲಾಗಿದೆ. ಗಂಡ, ಹೆಂಡತಿ ಮತ್ತು ಮೊದಲ ಮಗ ವೃತ್ತಿಯಿಂದ ವೈದ್ಯರಾಗಿದ್ದಾರೆ. ಎರಡನೇ ಮಗ ಕೂಡ ಎಂಬಿಬಿಎಸ್ ಓದುತ್ತಿದ್ದ. ಸದಾ ಮುಗುಳ್ನಗುತ್ತಿದ್ದ ಅಮಾನುಲ್ಲಾ ಜೀವನದಲ್ಲಿ ಖುದಾ ಈ ಆಟ ಆಡಬಾರದಿತ್ತು.
ಖುದಾ ಕೇರ್ ನರ್ಸಿಂಗ್ ಹೋಂ ಕೊಳ್ಳುವ ಸಲುವಾಗಿ ಕೋಲಾರದಿಂದ 35 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಡಾ. ಅಮಾನುಲ್ಲಾ ಸುಮಾರು 2 ಕೋಟಿ. ರು. ಸಾಲ ಮಾಡಿದ್ದರು. ಮತ್ತು ಕೋಲಾರದಲ್ಲಿ ಎಂಬಿಬಿಎಸ್ ಓದುತ್ತಿದ್ದ ಎರಡನೇ ಮಗನ ಸಲುವಾಗಿಯೂ ಆಗಾಧ ಸಾಲ ಮಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ ನಾಜಿಯಾ ಎಂಬ ದತ್ತು ಪುತ್ರಿಯೂ ಇದ್ದಾಳೆ.
ಆದರೆ, ನರ್ಸಿಂಗ್ ಹೋಂ ಲಾಭದಾಯಕವಾಗಿ ನಡೆಯುತ್ತಿರಲಿಲ್ಲ. ಸಾಲ ನೀಡಿದವರ ಉಪಟಳವೂ ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿತ್ತು. ಇದಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಗುರುವಾರ ರಾತ್ರಿ ವಿಷವನ್ನು ಇಂಜೆಕ್ಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.