ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11: ಉಗ್ರರ ದಾಳಿಯೆಂದರೆ ನಮಗೆ ವಾರ್ಷಿಕೋತ್ಸವವೇ?

|
Google Oneindia Kannada News

26/11: Has terror attacks on India become an annual event?
ವಾತಾವರಣ ತಣ್ಣಗಿದೆ. ಯಾರಿಗೂ ಬೆಚ್ಚಗಿನ ನಿದ್ದೆಯಿಂದ ಎದ್ದೇಳಲು ಮನಸ್ಸಿಲ್ಲ. ಹೆಚ್ಚಿನವರು ಮರೆತಿರಲಿಕ್ಕಿಲ್ಲ. ಸರಿಯಾಗಿ ಮೂರು ವರ್ಷದ ಹಿಂದೆ ಮುಂಬೈಗೆ ಬೆಂಕಿ ಬಿದ್ದಿತ್ತು. ಮುಂಬೈನಲ್ಲಿ ಭಯೋತ್ಪಾದಕರ ಅಟ್ಟಹಾಸದಿಂದ ಇಡೀ ಜಗತ್ತು ಬೆಚ್ಚಿಬಿದ್ದಿತ್ತು.

ದೇಶದ ಹಣಕಾಸು ರಾಜಧಾನಿಗೆ ಉಗ್ರರ ದಾಳಿ ಇದೇ ಮೊದಲಲ್ಲ. ವಿವಿಧ ಉಗ್ರರ ತಂಡಗಳು ಮುಂಬೈ ಮೇಲೆ ಆಗಾಗ ದಾಳಿ ನಡೆಸುತ್ತಲೇ ಇವೆ. ಪ್ರತಿಸಾರಿಯಂತೆ ಆಡಳಿತದಲ್ಲಿ ಕುಳಿತವರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ಉಗ್ರರ ದಮನಕ್ಕೆ ಸೂಕ್ತ ಕ್ರಮ ಮರಿಚಿಕೆಯಾಗಿದೆ. ಕಸಬ್ ಕೇಸ್ ಇನ್ನೂ ಮುಗಿದಿಲ್ಲ.

ಹಲವು ಬಾಂಬ್ ದಾಳಿಗಳ ಚರ್ವಿತಚರ್ವಣ. ದೇಶದ ಭದ್ರತೆ ಕುರಿತು ಪ್ರತಿಬಾರಿಯೂ ಅವಲೋಕನ ಮಾಡುವಂತೆ ಮಾಡುತ್ತದೆ. ಓಟ್ ಬ್ಯಾಂಕ್ ಹಿನ್ನಲೆಗಳಿಂದ ಸರಕಾರಗಳು ತೆಗೆದುಕೊಳ್ಳುವ ಕ್ರಮವೂ ಯಾರಿಗೂ ತೃಪ್ತಿದಾಯಕವೂ ಆಗಿಲ್ಲ. ಪಕ್ಕದ ಪಾಕಿಸ್ತಾನ ಮಗ್ಗಲಮುಳ್ಳು ಎಂದು ಎಲ್ಲರಿಗೂ ತಿಳಿದಿದೆ.

ಮುಂಬೈ ಮೇಲೆ ಭಯೋತ್ಪಾದಕರ ದಾಳಿ ಕುರಿತು ಕೇಸ್ ಸ್ಟಡಿ ಮಾಡಿ ಪಿಎಚ್ ಡಿ ಪಡೆಯಬಹುದು. ದಾಳಿ ನಂತರ ಮುಂಬೈ ಪೊಲೀಸರ ಪ್ರಕಾರ ಇದು ಗುಪ್ತಚರ ವೈಫಲ್ಯ. ಇನ್ನು ಕೆಲವರು ಆಡಳಿತದ ಮೇಲೆ ಮುಗಿಬಿದ್ದರು. ವಿವಿಧ ಏಜೆನ್ಸಿಗಳ ಜೊತೆ ದಾಳಿ ಮಾಹಿತಿ ಹಂಚಿಕೊಳ್ಳುವುದರಿಂದ ಲಾಭ ಪಡೆದವರು ಮತ್ತೆ ಭಯೋತ್ಪಾದಕರು.

ಅಭ್ಯಾಸ ಬಲವೋ ಗೊತ್ತಿಲ್ಲ. ನಾವು ಮರೆಯುತ್ತಲೇ ಇರುತ್ತೇವೆ. ಭಯೋತ್ಪಾದಕರ ಕುರಿತು ನೆನಪಾಗಲು ಮತ್ತೊಂದು ದಾಳಿಯಾಗಬೇಕು. ಅಂತಹ ನಿರ್ಲಿಪ್ತತೆ ನಮ್ಮದು.

ಮುಂಬೈ ಭಯೋತ್ಪಾದಕರ ದಾಳಿ ನಮ್ಮ ಕಡಲತೀರದ ಭದ್ರತೆಯ ಕುರಿತೂ ಚಿಂತಿಸುವಂತೆ ಮಾಡಿದೆ. ಸಮುದ್ರ ದಾಟಿ ದೇಶಕ್ಕೆ ಪ್ರವೇಶಿಸುವ ಉಗ್ರರ ಹೊಸ ಹಾದಿ ನಮ್ಮ ಭದ್ರತೆಗೆ ಹೊಸ ಸವಾಲು. ಕರಾವಳಿ ತೀರಗಳಲ್ಲಿ ಕಣ್ಣಿಗೆ ಎಣ್ಣೆ ಹಚ್ಚಿ ಕಾಯುವ ಅನಿವಾರ್ಯತೆ ನಮಗಿದೆ.

ಇಂತಹ ಅನಿಶ್ಚಿತ ದಾಳಿ ಸಂದರ್ಭದಲ್ಲಿ ನಮ್ಮ ಕಮಾಂಡೊಗಳು ತಕ್ಷಣ ಲಭ್ಯವಿರುತ್ತಾರ? ಕ್ಷಣಾರ್ಧದಲ್ಲಿ ಅವರನ್ನು ಕರೆಸಿಕೊಳ್ಳುವ ವ್ಯವಸ್ಥೆ ನಮ್ಮಲಿದೆಯಾ? ರಾಜಕಾರಣಿಗಳು ಮತ್ತು ಆಳುವವರ ರಕ್ಷಣೆಯಲ್ಲಿ ಇವರನ್ನೆಲ್ಲ ಬ್ಯುಸಿಯಾಗಿಸಿದ್ದು ನಮ್ಮದೇ ವ್ಯವಸ್ಥೆ.

ಆಳುವವರು ಮತ್ತು ಅಳುವವರು ಎಂಬ ಎರಡು ವರ್ಗ ಸದ್ಯ ಎದ್ದು ಕಾಣುತ್ತಿದೆ. ತಮ್ಮ ರಕ್ಷಣೆಗೆ ಮಾತ್ರ ಆದ್ಯತೆ ನೀಡಿ ಏರ್ ಕಂಡಿಷನ್ ರೂಂಗಳಲ್ಲಿ ಬೆಚ್ಚಿಗಿರುವ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಒಂದೆಡೆ. ಉಗ್ರರ ದಾಳಿ, ಬಡತನ, ಅನ್ಯಾಯಗಳಿಂದ ಅಳುವ ಇನ್ನೊಂದು ವರ್ಗ ಇನ್ನೊಂದೆಡೆ.

ಹಾಗಂತ ನಾವು ಯಾವುದೇ ಕ್ರಮಕೈಗೊಂಡಿಲ್ಲವೆಂದಲ್ಲ. ಯೋಜನೆಗಳೆಲ್ಲ ಫೈಲುಗಳಲ್ಲಿ ಬೆಚ್ಚಗಿವೆ. ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿರ್ಲಿಪ್ತವಾಗಿರುವ ಆಡಳಿತವನ್ನು ಎಚ್ಚರಿಸುವರು ಯಾರು? ಈ ಕುರಿತು ನಾವೇ ಯೋಚಿಸದಿದ್ದರೆ ಹೇಗೆ?

ಆಮ್ ಆದ್ಮಿ ಅಥವಾ ಅಳುವ ವರ್ಗದ ತಾಳ್ಮೆಗೂ ಒಂದು ಮಿತಿಯಿದೆ. ಕಾನೂನು ಹೇಳುವರಿಗೂ ಕೂಡ ಉಗ್ರರ ಸಮಸ್ಯೆ ಕುರಿತು ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಜುಲೈ 13, 2011ರಂದು ಮುಂಬೈ ಮೇಲೆ ಮತ್ತೂ ಒಂದು ದಾಳಿ ನಡೆದಿತ್ತು. ಒಪೆರಾ ಹೌಸ್, ಝವೆರಿ ಬಝಾರ್ ಮತ್ತು ದಾಬರ್ ನಗರಗಳಲ್ಲಿ ಉಗ್ರರ ಅಟ್ಟಹಾಸದಿಂದ 23 ಜನ ಪ್ರಾಣಕಳೆದುಕೊಂಡಿದ್ದರು. 130ರಷ್ಟು ಜನರು ಗಾಯಗೊಂಡಿದ್ದರು.

ಉಗ್ರರ ದಾಳಿ ಕುರಿತು ಭಾರತ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ದೇಶದಲ್ಲಿ ಯಾವುದೇ ಭಯವಿಲ್ಲದೇ ಜನರು ಬದುಕುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕು. ಜನನಾಯಕರು ಸ್ವಹಿತಾಶಕ್ತಿ ಬಿಟ್ಟು ದೇಶದ ಹಿತಾಶಕ್ತಿ ಕುರಿತು ಯೋಚಿಸುವಂತಾಗಬೇಕು. ರಾಜಕಾರಣಿಗಳು ಸೇರಿದಂತೆ ನಾವು ಹೀಗೆಯೇ ತೂಕಡಿಸುತ್ತಿದ್ದರೆ ಭಾರತ ಪ್ರತಿನಿತ್ಯವೂ ಉಗ್ರರ ಟಾರ್ಗೆಟ್ ಆಗುತ್ತದೆ.

ಪಕ್ಕದಲ್ಲಿ ನಿಂತಿರುವ ಕಾರು ಸಿಡಿಯಬಹುದು. ಸ್ಕೂಟರ್ ನಲ್ಲಿ ಬಾಂಬ್ ಇರಬಹುದು. ಯಾವುದೋ ಸೂಟ್ ಕೇಸ್ ಯಾವಾಗ ಬೇಕಾದರೂ ಸಿಡಿಯಬಹುದು. ತುಂಬಿ ತುಳುಕುತ್ತಿರುವ ಸಂತೆ ಕ್ಷಣಾರ್ಧದಲ್ಲಿ ಸ್ಮಶಾನವಾಗಬಹುದು. ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಉಗ್ರನಾಗಿರಬಹುದು. ಯಾವ ಬಾಂಬ್ ಯಾವಾಗ ಸಿಡಿಯಬಹುದೆಂದು ಯಾರಿಗೆ ಗೊತ್ತು?

ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ನಾವು ಎಚ್ಚೆತ್ತುಕೊಳ್ಳುವುದು ಯಾವಾಗ?

English summary
26/11: Has terror attacks on India become an annual event? n yet another reminder of the shoddy security situation in the country, India commemorates the third anniversary of the deadly Mumbai terror attacks. With the financial capital of India having to face the brunt of many terror attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X