ಶಂಕರ್ ಬಿದರಿ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ?

ಗೃಹ ಸಚಿವಾಲಯದ ಉನ್ನತ ಮೂಲಗಳ ಪ್ರಕಾರ ಬಿದರಿ 2012ರ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದು, ಅವರು ಡಿಜಿಪಿ ಆಗುವ ಅವಕಾಶಗಳು ಹೆಚ್ಚಿವೆ ಎನ್ನಲಾಗಿದೆ. ಜತೆಗೆ ಈಗಿನ ರಾಜಕೀಯ ಲೆಕ್ಕಾಚಾರದಲ್ಲಿ ಆಡಳಿತಾರೂಢ ಬಿಜೆಪಿಗೆ ಬಿದರಿ ಹತ್ತಿರವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಅಗ್ನಿಶಾಮಕ ದಳದ ಡಿಜಿಪಿ ಎ.ಆರ್.ಇನ್ಫೆಂಟ್ ಸಹ ರೇಸಿನಲ್ಲಿದ್ದು, ಡಿಜಿಪಿ ದರ್ಜೆಯ ಅಧಿಕಾರಿಗಳಾದ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಸುಶಾಂತ್ ಮಹಾಪಾತ್ರ ಮತ್ತು ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ರೂಪಕ್ ಕುಮಾರ್ ದತ್ತ ಅವರೆಲ್ಲರ ಹೆಸರುಗಳನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ರಾಜ್ಯ ಸರ್ಕಾರ ಕಳುಹಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಯೊಬ್ಬರು ಈ ಪಟ್ಟಿ ಜತೆ ದೆಹಲಿಗೆ ತೆರಳಿದ್ದು, ಅಲ್ಲಿ ಅರ್ಹ ಮೂರು ಮಂದಿಯ ಹೆಸರುಗಳನ್ನು ಪಟ್ಟಿ ಮಾಡಿ ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ರಾಜ್ಯ ಸರ್ಕಾರವು ಮೂವರಲ್ಲಿ ಒಬ್ಬರನ್ನು ಡಿಜಿ ಮತ್ತು ಐಜಿಪಿಯಾಗಿ ನೇಮಕ ಮಾಡಲಿದೆ.
ಸೇವಾ ಹಿರಿತನ ಮತ್ತು ಉತ್ತಮ ಸೇವಾ ದಾಖಲೆಗಳ ಆಧಾರದ ಮೇಲೆಯೇ ಅಧಿಕಾರಿಗಳ ಪಟ್ಟಿಯನ್ನು ಯುಪಿಎಸ್ಸಿ ಸಿದ್ಧಪಡಿಸುತ್ತದೆ. ಬಿದರಿ ಅವರಿಗೆ ಎರಡು ರಾಷ್ಟ್ರಮಟ್ಟದ ಪ್ರಶಸ್ತಿಗಳು ಕೂಡ ಬಂದಿರುವ ಕಾರಣ ಅವರ ಹೆಸರನ್ನೇ ಸರ್ಕಾರ ಅಂತಿಮ ಗೊಳಿಸುವ ಸಾಧ್ಯತೆ ಇದೆ.
ಬಿದರಿ ಅವರಿಗಿಂತ ಸೇವಾ ಹಿರಿತನದಲ್ಲಿ ಹಿರಿಯವರಾದ ಲಾಲ್ ರೋಕುಮ್ ಪಚಾವ್ ಅವರು ಪ್ರಸ್ತುತ ಅಂತರ ರಾಜ್ಯ ನಿಯೋಜನೆ ಮೇಲೆ ಮಿಜೊರಾಂ ರಾಜ್ಯಕ್ಕೆ ತೆರಳಿದ್ದು, ಅವರು ಅಲ್ಲಿ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.











Click it and Unblock the Notifications