ಅಕ್ರಮ ಆಸ್ತಿ ಗಳಿಕೆ: ಸೋನಿಯಾ ಗಾಂಧಿ ಮೇಲೆ ಟಿಡಿಪಿ ಕಣ್ಣು
ಟಿಡಿಪಿ ವಿರುದ್ಧ ವೈಎಸ್ ಜಗನ್ ಎತ್ತಿಕಟ್ಟಿ ಆಟ ಆಡಿಸುತ್ತಿದ್ದ ಕಾಂಗ್ರೆಸ್ ಗೆ ಈಗ ಮುಜುಗರ ಅನುಭವಿಸುವಂತ ಮಾಡಲು ಟಿಡಿಪಿ ಸಜ್ಜಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಅಕ್ರಮವಾಗಿ ಸಂಪಾದಿಸಿರುವ ಸ್ಥಿರಾಸ್ತಿ ಬಗ್ಗೆ ತನಿಖೆಗೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಟಿಡಿಪಿ ಸಿದ್ಧತೆ ನಡೆಸಿದೆ.
ಸೋನಿಯಾ ಗಾಂಧಿ ಅಳಿಯ ರಾರ್ಬಡ್ ವದ್ರಾ ಅವರು ಹತ್ತು ಹಲವು ಸರ್ಕಾರೇತರ ಸಂಸ್ಥೆಗಳಿಂದ ಭರ್ಜರಿಯಾಗಿ ಹಣ ಪಡೆದಿದ್ದಾರೆ. ಇದಕ್ಕೆ ಅತ್ತೆ ಸೋನಿಯಾಜಿ ಅವರ ಅಭಯ ಹಸ್ತವೇ ಕಾರಣ ಎಂದು ದೂರಲಾಗಿದೆ.
ಸದ್ಯ ದೆಹಲಿಯಲ್ಲಿರುವ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸಿದ್ದಾರೆ.
ಸೋನಿಯಾ ಗಾಂಧಿ ಜೊತೆಗೆ ಮೋತಿಲಾಲ್ ವೋರಾ ಹಾಗೂ ಅಹ್ಮದ್ ಪಟೇಲ್ ಅವರನ್ನು ಕೋರ್ಟಿಗೆಳೆಯಲು ಟಿಡಿಪಿ ಚಿಂತಿಸಿದೆ.
ಆಂಧ್ರದ ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷದಿಂದ ಚಂದ್ರಬಾಬು ನಾಯ್ಡು ಅವರ ಮೇಲೆ ಸಿಬಿಐ ಕೇಸ್ ಹಾಕಿದ್ದಾರೆ. ವೈಎಸ್ ಜಗನ್ ಕೂಡಾ ಇದಕ್ಕೆ ಪೂರಕವಾಗಿ ನಡೆದುಕೊಂಡಿದ್ದಾರೆ.
ಟಿಡಿಪಿ ಮುಖಂಡರಾದ ಕೆ ಯೆರ್ರಾನಾಯ್ಡು, ವೈ ರಾಮ ಕೃಷ್ಣುಡು ಅವರು ಜನತಾ ಪಾರ್ಟಿ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸ್ವಾಮಿ ಅವರು 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾಜಿ ಅಳಿಯ ರಾರ್ಬಟ್ ವಿರುದ್ಧ ಈಗಾಗಲೇ ಕೋರ್ಟ್ ಗೆ ದೂರು ನೀಡಿದ್ದಾರೆ.