ಸಿಎಂ ಪಟ್ಟದ ಆಸೆ ಇಲ್ಲ, ರೆಡ್ಡಿ ಬ್ರದರ್ಸ್ ಕಥೆ ಕ್ಲೋಸ್

ಪ್ರಶ್ನೆ: ಬಳ್ಳಾರಿ ರೆಡ್ಡಿ ಸೋದರರು ಸರ್ಕಾರಕ್ಕೆ ಮಾರಕವಾಗಬಲ್ಲರೇ?
ಯಡಿಯೂರಪ್ಪ: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ರೆಡ್ಡಿಗಳ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಸೋಲುತ್ತಾರೆ. ಜನಾರ್ದನ ರೆಡ್ಡಿ ಇನ್ನೂ ಜೈಲಿನಲ್ಲಿದ್ದಾರೆ. ಕರುಣಾಕರ ಹಾಗೂ ಸೋಮಶೇಖರ ಪಕ್ಷದ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ನಾನು ಸಿಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯ ಬಿಜೆಪಿಯನ್ನು ಕಾಪಾಡಲಿದೆ.
ಪ್ರಶ್ನೆ: ಮುಂದಿನ ಚುನಾವಣೆಯಲಿ ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ?
ಯಡಿಯೂರಪ್ಪ: ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಆರು ತಿಂಗಳ ನಂತರ ಸಿಎಂ ಪದವಿ ಮತ್ತೆ ಸಿಗುತ್ತದೆ ಎಂದಿದ್ದು ನಿಜ. ಆದರೆ, ಅದು ಪಕ್ಷದ ಹಿರಿಯ ನಾಯಕರು ಹೇಳಿಸಿದ್ದು, ಅವರು ಬಯಸಿದ್ದು, ನನಗೆ ಈಗ ಸಿಎಂ ಪಟ್ಟದ ಆಸೆಯಿಲ್ಲ.
ಪ್ರಶ್ನೆ: ಸಿಎಂ ಪಟ್ಟ ಸಿಗಲು ಸದಾನಂದ ಗೌಡರ ಸರ್ಕಾರ ಅಡ್ಡಿಯಾಗಿದಿಯೇ?
ಯಡಿಯೂರಪ್ಪ: ನಾನು ಸಿಎಂ ಆಗಬೇಕು ಎಂದು ಯಾವತ್ತೂ ಯಾರ ಮೇಲೂ ಒತ್ತಡ ಹೇರಲಿಲ್ಲ. ನನ್ನ ಬೆಂಬಲಿಗರಿಂದ ಸದಾನಂದ ಗೌಡರ ಸರ್ಕಾರಕ್ಕೆ ತೊಂದರೆಯಿದೆ. ಸರ್ಕಾರ ಬೀಳಲಿದೆ ಎಂಬುದು ಊಹಾಪೋಹದ ಮಾತುಗಳಷ್ಟೇ.
ಸರ್ಕಾರ ಬೀಳಿಸಬೇಕಾದರೆ, ಸರ್ಕಾರ ರಚನೆಗೂ ಮುನ್ನವೇ ಆ ಕೆಲಸ ಮಾಡಬಹುದಿತ್ತು. ರಾಜಭವನಕ್ಕೆ ನಾನು ರಾಜೀನಾಮೆ ಸಲ್ಲಿಸಲು ಹೋದಾಗ ನನ್ನ ಜೊತೆಗೆ 70 ಜನ ಶಾಸಕರು ಹಾಗೂ ಎಲ್ಲಾ ಸಂಸದರು ಬಂದಿದ್ದರು ಎಂಬುದನ್ನು ಮರೆಯುವಂತಿಲ್ಲ. ನನ್ನ ಬೆಂಬಲಿಗರನ್ನು ಸರ್ಕಾರ ಉರುಳಿಸಲು ಎಂದೂ ಬಳಸುವುದಿಲ್ಲ.
ಪ್ರಶ್ನೆ: ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದಿದ್ದೀರಾ ಏನ್ನನ್ನಿಸುತ್ತದೆ?
ಯಡಿಯೂರಪ್ಪ: ನಾನು ಯಾವುದೆ ಒಂದು ಸಮುದಾಯಕ್ಕೆ ಸೇರಿದವನಲ್ಲ. ಲಿಂಗಾಯತ ನಾಯಕನಾಗಿ ಜನ ನನ್ನನ್ನು ಗುರುತಿಸುವುದಿಲ್ಲ. ನಾನು ಎಲ್ಲರಿಗೂ ಸೇರಿದವನು. ಎಲ್ಲಾ ಮಠಗಳಿಗೂ ಭೇಟಿ ಕೊಡುತ್ತೇನೆ. ಮುಸ್ಲೀಮ್ ಹಾಗೂ ಕ್ರೈಸ್ತ ಬಾಂಧವರ ಕರೆಗೆ ಸದಾ ಓಗೊಡುತ್ತೇನೆ.
ಪ್ರಶ್ನೆ: ಕಡೆಯದಾಗಿ ನಿಮ್ಮನ್ನು ತುಳಿದವರು ಯಾರು?
ಯಡಿಯೂರಪ್ಪ: ಯಾರೂ ತಮ್ಮ ಕ್ಷೇತ್ರದಲ್ಲಿ ಜೀರೋಗಳಾಗಿದ್ದಾರೋ ಅವರು ದೆಹಲಿಯಲ್ಲಿ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯುವ ಆಸೆಯಿದ್ದರೆ ಮೊದಲು ಚುನಾವಣೆ ಎದುರಿಸಿ ಗೆಲ್ಲಲಿ. ನಾನಂತೂ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.












Click it and Unblock the Notifications