ಜಯಲಲಿತಾಗೆ ಇರೋದು ಯಡಿಯೂರಪ್ಪಗೆ ಏಕಿಲ್ಲ ?
ಪಕ್ಷದ ಒಳಗೆ ಮತ್ತು ಹೊರಗಿನ ಕುತಂತ್ರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದೆ ಎಂದು ಕೊಪ್ಪಳ ಸಂಸದ ಶಿವ ರಾಮೇ ಗೌಡ ಕಿಡಿಕಾರಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದ ಒಳಗಿನವರು ಹಾಗೂ ಹೊರಗಿನವರು ಸೇರಿ ಬಲಿಪಶು ಮಾಡಿದ್ದಾರೆ ಎಂದು ಶಿವರಾಮೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತರ ಮೇಲೆ ಆರೋಪ ಬಂದಾಗ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಕಾರಣದಿಂದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಿತು. ಆದರೆ, ಶೀಲಾ ದೀಕ್ಷಿತ್ ಅವರನ್ನು ಇಳಿಸುವಲ್ಲಿ ಕೇಂದ್ರ ಬಿಜೆಪಿ ಸಾಧ್ಯವಾಗದೇ ಹೋಯಿತು ಎಂದು ಅವರು ವ್ಯಂಗ್ಯವಾಡಿದರು.
ಈಗಲೂ ಸಹ ಯಡಿಯೂರಪ್ಪ ಅವರನ್ನು ದೂರ ಇಡುವ ಪ್ರಯತ್ನವನ್ನು ಪಕ್ಷದ ಮುಖಂಡರು ಮಾಡಬಾರದು. ಪಕ್ಷವನ್ನು ಸಾಕಷ್ಟು ಬೆಳೆಸಿ ಅಧಿಕಾರಕ್ಕೆ ತರಲು ಕಾರಣರಾದ ತಮಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ ಎಂಬ ನೋವು ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಅವರಿಗೆ ಸೂಕ್ತ ಜವಾಬ್ದಾರಿ ನೀಡಬೇಕು ಎಂದು ಹೇಳಿದ ಶಿವರಾಮೇಗೌಡ ಅವರು ಯಾವ ಜವಾಬ್ದಾರಿ ಎನ್ನುವ ಕುರಿತು ಸ್ಪಷ್ಟಪಡಿಸಲಿಲ್ಲ.