ರೆಡ್ಡಿ ಶಿಕಾರಿಗೆ ಸಿಬಿಐ ಗೂಢಚಾರಿ ಮಾಡಿದ್ದೇನು?
ಜೂನ್ ತಿಂಗಳಲ್ಲಿಯೇ 'ಕುಠೀರ ಪ್ರವೇಶ' ಮಾಡಿದ್ದ ಸಿಬಿಐ ಗೂಢಚಾರಿ ರೆಡ್ಡಿಯ ಅಷ್ಟೂ ಚಲನವಲನಗಳ ಬಗ್ಗೆ, ಕುಠೀರದ interiors ಬಗ್ಗೆ ಮೇಲಿನ ಅಧಿಕಾರಿಗಳಿಗೆ ಇಂಚಿಂಚೂ ಮಾಹಿತಿ ರವಾನಿಸಿದ್ದರು. ಹಾಗೆ ನೋಡಿದರೆ ರೆಡ್ಡಿ ತನ್ನ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ ಎಂದಿಗೂ ಯಾಮಾರಿರಲಿಲ್ಲ. ಆದರೆ... ಈ ಬಾರಿ ಯಾಮಾರಿದ್ದರು. ಮತ್ತು ಅದುವೇ ಅವರಿಗೆ ಈಗ ಮುಳುವಾಗಿರುವುದು.
ರಡ್ಡಿಯ ಕುಠೀರ ಮತ್ತು 'ಕೊಠೇರಿ'ಯೊಳಕ್ಕೆ ಪ್ರವೇಶ ಗಿಟ್ಟಿಸಿದ್ದ ಸಿಬಿಐ ಗೂಢಚಾರಿ ಚಾಚೂ ತಪ್ಪದೆ ಸಿಬಿಐಗೆ ಅಗತ್ಯವಾಗಿದ್ದ ಅಷ್ಟೂ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮಾಹಿತಿಯನ್ನು ಆಧರಿಸಿಯೇ ಸಿಬಿಐ ಥಿಂಕ್ ಟ್ಯಾಂಕ್ ದಾಳಿಗೆ ಮಹೂರ್ತವಿಟ್ಟಿದ್ದು.
ಸೆಪ್ಟೆಂಬರ್ 5ರಂದು ರೆಡ್ಡಿ ಕುಠೀರದ ಮೇಲೆ ದಾಳಿ ನಡೆಸುವುದಕ್ಕೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ರೆಡ್ಡಿ ಬಾಡಿಗಾರ್ಡ್ (ಅರ್ಥಾತ್ ಸಿಬಿಐ ಗೂಢಚಾರಿ) ತನ್ನ ಧಣಿಯೆದುರು ನಿಂತು 'ನನಗೆ ಆರೋಗ್ಯ ಸರಿಯಿಲ್ಲ. ಮನೆಯಲ್ಲೂ ತಾಪತ್ರಯಗಳೂ ಸಾಕಷ್ಟಿವೆ. ನಾನು ಕೆಲಸ ಬಿಡ್ತೀನಿ' ಎಂದು ರೆಡ್ಡಿಗೆ ತಿಳಿಸಿದ.
ರೆಡ್ಡಿಯೂ ಅಷ್ಟೇ ಮರುಮಾತನಾಡದೇ 'ಸರಿ. ನೀನು ಕೆಲಸ ಬಿಟ್ಟು ಹೋಗು' ಎಂದು ಹೇಳಿದ್ದರು. ಆದರೆ ಮುಂದೆ ಕೇವಲ ಮೂರೇ ದಿನಗಳಲ್ಲಿ ಇವಯ್ಯ ನನಗೆ ಮುಳುಗುನೀರು ತರುತ್ತಾನೆ ಎಂಬುದು ನಿದ್ದೆಯಲ್ಲೇ ಇದ್ದ ರೆಡ್ಡಿಗೆ ಕೊನೆಯ ಕ್ಷಣದವರೆಗೂ ಕನಸು ಬೀಳಲಿಲ್ಲ.