ರೆಡ್ಡಿ ಕುಠೀರದಲ್ಲಿ ಮೂರು ತಿಂಗಳು ಬೀಡುಬಿಟ್ಟಿದ್ದ ಸಿಬಿಐ ಏಜೆಂಟ್!
'ಬೆಂಗಳೂರು ಮಿರರ್' ಪ್ರಕಾರ ರೆಡ್ಡಿಯ ನಂಬಿಗಸ್ಥ ಭದ್ರತಾ ಸಿಬ್ಬಂದಿಯ ಸೋಗಿನಲ್ಲಿ ಸಿಬಿಐ ಅಧಿಕಾರಿರೊಬ್ಬರು ಮೂರು ತಿಂಗಳ ಕಾಲ ಅಕ್ಷರಶಃ ರೆಡ್ಡಿಯ ನೆರಳಾಗಿ ಕಾರ್ಯಮಗ್ನರಾಗಿದ್ದಾರೆ. ಅದೂ ಸಿಂಹದ ಗುಹೆಯಲ್ಲೇ, ಅದೂ ಒಂದೆರಡು ದಿನವಲ್ಲ ಬರೋಬ್ಬರು ಮೂರು ತಿಂಗಳ ಕಾಲ ಬಿಡಾರ ಹೂಡಿ ಸಿಬಿಐ ಯಶಸ್ಸಿಗೆ ಕಾರಣರಾಗಿದ್ದಾರೆ.
ಆದರೆ ತನ್ನ ಕುಠೀರದಲ್ಲೇ ಗೂಢಚಾರಿ ಸಿಬಿಐ ಅಧಿಕಾರಿ ಪ್ರತಿಷ್ಠಾಪಿಸಿರುವ ಬಗ್ಗೆ ರೆಡ್ಡಿಗೆ ಕಿಂಚಿತ್ತೂ ಸುಳಿವು ಸಿಕ್ಕಿರಲಿಲ್ಲ. ಸದರಿ ಅಧಿಕಾರಿ ಇಂತಹ ಸಾಹಸಕ್ಕೆ ಮುಂದಾಗದಿದ್ದರೆ ಖಂಡಿತ ರೆಡ್ಡಿಯನ್ನು ಖಂಡಿತ ಇಷ್ಟು ಸುಲಭವಾಗಿ ಖೆಡ್ಡಾಗೆ ಬೀಳಿಸುವುದಕ್ಕೆ ಆಗುತ್ತಿರಲಿಲ್ಲ ಎಂದು ಸಿಬಿಐ ಮೂಲಗಳು ಈಗ ಹೇಳುತ್ತಿವೆ.
ಸೆಪ್ಟೆಂಬರ್ 5ರ ಬೆಳಗಿನ ಜಾವ ತನ್ನ ಖಾಸಗಿ ಭದ್ರತಾ ಸಿಬ್ಬಂದಿಯಾಗಿದ್ದ ವ್ಯಕ್ತಿ ಬಂದು 'ಎದ್ದೇಳಿ. ನಿದ್ದೆ ಮಾಡಿದ್ದು ಸಾಕು. ನಾವು ಸಿಬಿಐ ಅಧಿಕಾರಿಗಳು' ಎಂದಾಗಲೇ ರೆಡ್ಡಿ ಮಹೋದಯ್ ಗೆ ತಾನು ಎಲ್ಲಿ ಪೊರಪಾಟು ಬಿದ್ದೆ ಎಂಬುದರ ಅರಿವಾಗಿದ್ದು. ಅಲ್ಲಿಯವರೆಗೂ, ಆ ವ್ಯಕ್ತಿಯನ್ನು ಯಃಕಶ್ಚಿತ್ ತನ್ನ ಬಾಡಿಗಾರ್ಡ್ ಎಂದು ಅಂದ್ಕೊಂಡಿದ್ದರು ರೆಡ್ಡಿಗಾರು.