ಕಾವೇರದ ರೆಸಾರ್ಟ್ ರಾಜಕೀಯ: ಆಂತರಿಕ ಕಚ್ಚಾಟ ಅಂತ್ಯಕ್ಕೆ ಕಾಂಗ್ರೆಸ್ ಒತ್ತು

ಕಾಂಗ್ರೆಸ್ನೊಳಗೆ ಒಡಕುಂಟಾಗಿದೆ ಎಂದು ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಲು, ಚುನಾವಣೆ ಎದುರಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ತಾಂಡವವಾಡುತ್ತಿರುವುದನ್ನು ಅನುಮೋದಿಸುವ ಧಾಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ 'ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಉದ್ದೇಶದಿಂದ ಸಭೆ ನಡೆಸಲಾಗಿದ್ದು, ಪಕ್ಷದ ಎಲ್ಲಾ ಪ್ರಮುಖ ನಾಯಕರು ಬಿಚ್ಚು ಮನಸ್ಸಿನಿಂದ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ' ಎಂದರು.
ಪಕ್ಷದ ಎಲ್ಲಾ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವಿತ್ತು. ಈ ಕುರಿತು ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಇದ್ದವು. ಈ ಹಿನ್ನೆಲೆಯಲ್ಲಿ ಎಐಸಿಸಿಯು ಈ ಮಹತ್ವದ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯಿತು ಎಂದು ಅವರು ಹೇಳಿದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆ ಸಂಜೆ 4.30ರವರೆಗೂ ನಡೆಯಿತು.
ಚುನಾವಣೆಗೆ ಸಿದ್ಧತೆ: ಬಿಜೆಪಿಯ ಮಾಜಿ ಸಿಎಂ ಸೇರಿದಂತೆ ಹಲವು ಮಾಜಿ ಸಚಿವರು ಜೈಲು ಸೇರಿದ್ದಾರೆ. ಜೊತೆಗೆ ಸರಕಾರ ದುರಾಡಳಿತ ನಡೆಸುತ್ತಿರುವುದರಿಂದ ರಾಜ್ಯದ ಜನ ಕಾಂಗ್ರೆಸ್ನತ್ತ ಮನಸ್ಸು ಮಾಡಿದ್ದಾರೆ. ಇದಕ್ಕಾಗಿ ಚುನಾವಣಾ ಸಿದ್ಧತೆ ಈಗಿಂದಲೇ ಮಾಡಬೇಕಾಗಿದೆ. ಅದಕ್ಕಾಗಿ ಪಕ್ಷ ಸಂಘಟನೆಯ ಕುರಿತು ಹಿರಿಯ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದರು.
ಎಲ್ಲರಿಗೂ ಹೊಣೆಗಾರಿಕೆ: ಚುನಾವಣಾ ತಯಾರಿಯ ಹೊಣೆಗಾರಿಕೆಯನ್ನು ಕೇವಲ ಕೆಪಿಸಿಸಿಗೆ ಸೀಮಿತಗೊಳಿಸದೇ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಮತ್ತು ಎಐಸಿಸಿ ಪದಾಧಿಕಾರಿಗಳಾಗಿರುವ ರಾಜ್ಯದ ಮುಖಂಡರಿಗೂ ಉಸ್ತುವಾರಿ ಒಪ್ಪಿಸಲು ನಿರ್ಧರಿಸಲಾಗಿದೆ. ನಿಗದಿತ ವಿಭಾಗ, ಜಿಲ್ಲೆ ಅಥವಾ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಈ ಮುಖಂಡರಿಗೆ ವಹಿಸುವ ಬಗ್ಗೆ ಚರ್ಚೆ ನಡೆದಿದ್ದು, ಸಹಮತ ವ್ಯಕ್ತವಾಗಿದೆ ಎಂದು ಮುಖಂಡರು ಹೇಳಿದರು.












Click it and Unblock the Notifications