ಚಂಡವ್ಯಾಘ್ರನ ಸೆರೆಗೆ ಕರಿರಾಜನಿಗೆ ಮೊರೆ

ಇದುವರೆಗೆ ಸುಮಾರು ಇಪ್ಪತೈದಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿತೆಗೆದುಕೊಂಡಿರುವ ವ್ಯಾಘ್ರನನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, ಎಲ್ಲಿ ಅಡಗಿ ಕುಳಿತಿದೆ ಎಂಬ ಸುಳಿವು ಕೂಡ ಇನ್ನು ಲಭ್ಯವಾಗಿಲ್ಲ. ಹುಲಿಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹಲವೆಡೆ ಬೋನ್ಗಳನ್ನಿಟ್ಟು ಕಾದು ಕುಳಿತರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅರಣ್ಯಾಧಿಕಾರಿಗಳು ಮತ್ತಿಗೋಡಿನ ಆನೆ ಶಿಬಿರದಿಂದ ಬಂದಿರುವ ಸಾಕಾನೆ ಅಭಿಮನ್ಯುವನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈಗಾಗಲೇ ದಕ್ಷಿಣ ಕೊಡಗಿನ ಕೋತೂರು, ಕೋಣಗೇರಿ, ಹೈಸೊಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನಡೆಸುತ್ತಿರುವ ಹುಲಿ ಎಲ್ಲಿ ಅಡಗಿದೆ ಎಂಬುವುದು ರಹಸ್ಯವಾಗಿರುವುದರಿಂದ ಅದರ ಪತ್ತೆಗೆ ಅಭಿಮನ್ಯು ಮುಂದಾಗಿದ್ದಾನೆ. ತಮ್ಮೊಂದಿಗೆ ಮತ್ತು ಬರಿಸುವ ಇಂಜೆಕ್ಷನ್ ಇರಿಸಿಕೊಂಡು ಆನೆಯ ಮೇಲೆ ಕುಳಿತು ಕಾಡಿನಲ್ಲಿ ಹುಲಿಯನ್ನು ಅರಸುತ್ತಿರುವ ಅರಣ್ಯಾಧಿಕಾರಿಗಳು ಹುಲಿ ಎದುರಾದರೆ ಅದಕ್ಕೆ ಗನ್ ಮೂಲಕ ಮತ್ತು ಬರಿಸುವ ಇಂಜೆಕ್ಷನ್ ಹೊಡೆದು ಸೆರೆಹಿಡಿಯು ಆಲೋಚನೆಯಲ್ಲಿದ್ದಾರೆ.
ಕೆಲವರ ಪ್ರಕಾರ ಉಪಟಳ ನೀಡುತ್ತಿರುವ ಹುಲಿ ಹೆಣ್ಣು ಹುಲಿಯಾಗಿದೆಯಂತೆ. ಈಗಾಗಲೇ ಇದು ಜಾನುವಾರುಗಳ ರಕ್ತದ ರುಚಿಯನ್ನು ನೋಡಿರುವುದರಿಂದ ಅಷ್ಟು ಸುಲಭವಾಗಿ ಕಾಡಿಗೆ ತೆರಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹುಲಿ ಸೆರೆ ಸಿಕ್ಕದ ಹೊರತು ಅಕ್ಕಪಕ್ಕದ ಬೆಳೆಗಾರರು ನೆಮ್ಮದಿಯಾಗಿ ಓಡಾಡುವಂತಿಲ್ಲ. ಮತ್ತೊಂದೆಡೆ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಮಾಡಿ ಕಾಡಿನೊಳಕ್ಕೆ ನುಗ್ಗಿ ಹುಲಿಯನ್ನು ಹುಡುಕುತ್ತಿದ್ದಾರೆ.












Click it and Unblock the Notifications