ದೇವೇಗೌಡರ ತೀರದ ಬಯಕೆ ಇನ್ನಾದರೂ ಈಡೇರಲಿ

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ಹೆಬ್ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಶುಭಕಾರ್ಯಕ್ಕೆ ಬಂದಿದ್ದ ದೇವೇಗೌಡರು ತಮ್ಮ ದುಃಖ ತೋಡಿಕೊಂಡರು. 'ನಾನಂದುಕೊಂಡಂತೆ ತವರು ಜಿಲ್ಲೆ ಹಾಸನದ ಅಭಿವೃದ್ಧಿ ಆಗದೇ ಇರುವುದಕ್ಕೆ ಅಸಮಾಧಾನವಾಗಿದೆ' ಎಂದರು.
ಜಿಲ್ಲೆಯಲ್ಲಿ ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್ ಕಾಲೇಜುಗಳು ಆಗಿವೆ. ಆದರೆ ಮಹತ್ವಾಕಾಂಕ್ಷೆಯ ಏರ್ಪೋರ್ಟ್ ಕನಸು ನನಸಾಗಿಲ್ಲದಿರುವುದು ಇನ್ನೂ ಕಾಡುತ್ತದೆ ಎಂದು ಗೌಡರು ವಿಷಾದ ರಾಗ ಹಾಡಿದರು.
ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬದ್ಧರಾಗಿರಬೇಕು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಕಿವಿಮಾತು ಹೇಳಿದ ಗೌಡರು ಮತ್ತೆ ಫ್ಲ್ಯಾಶ್ ಬ್ಯಾಕ್ ಗೆ ಹೋದರು.
ನಾನು ಪ್ರಧಾನ ಮಂತ್ರಿಯಾಗಿದ್ದಾಗ ಮಂಜೂರಾತಿ ನೀಡಿದ್ದ ಹಾಸನ- ಬೆಂಗಳೂರು ರೈಲು ಮಾರ್ಗದ ಕಾಮಗಾರಿ ಆರಂಭವಾಗಿಲ್ಲ. ವಿಮಾನ ನಿಲ್ದಾಣ ಕಾರ್ಯಕ್ಕೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಲಾಗಿತ್ತು.
ಆದರೆ ಎಲ್ಲಾ ಯೋಜನೆಗಳು ನೆನೆಗುದಿಗೆ ಬಿದ್ದಿದೆ. ನಾನು ಇರುವಾಗಲೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಜಿಲ್ಲೆ ಸಮಗ್ರ ಅಭಿವೃದ್ಧಿಯನ್ನು ಕಣ್ಣಾರೆ ಕಾಣಬೇಕು ಎಂಬುದು ನನ್ನ ಆಸೆ ಎಂದು ಗೌಡರು ಮೌನವಾದರು. ನಾಡಿನ ಹಿರಿ ರಾಜಕೀಯ ಮುತ್ಸದ್ಧಿ ದೇವೇಗೌಡರ ಮೌನದ ಅರ್ಥ ಕಂಡುಕೊಂಡ ಜೆಡಿಎಸ್ ಕಾರ್ಯಕರ್ತರು ಚಡಪಡಿಸುತ್ತಿದ್ದರು.












Click it and Unblock the Notifications