ಮಂಗಳೂರು ಚರ್ಚ್ ದಾಳಿಯ ಹಿಂದೆ ಕ್ರೈಸ್ತ ಯುವಕ?

ಆರೋಪಿ ಶಿಬು ನಗರ ನಿವಾಸಿಯಾಗಿದ್ದು, ಎವರೆಸ್ಟ್ ಟ್ರಾವೆಲ್ ಎನ್ನುವ ಸಿಟಿ ಬಸ್ ನಲ್ಲಿ ಈ ಹಿಂದೆ ಕಂಡಕ್ಟರ್ ಆಗಿದ್ದ. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯ ಪೀಡಿತನಾಗಿದ್ದ ಈತ ಘಟನೆ ನಡೆದ ರಾತ್ರಿ ವಿಪರೀತ ಮದ್ಯಪಾನ ಸೇವಿಸಿ ಚರ್ಚ್ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದ. ಮೇರಿಮಾತೆಯ ಕಿರೀಟವನ್ನು ಕೆಳಗೆಸೆದು ಯೇಸು ಮೂರ್ತಿಯ ಪಾದಕ್ಕೆ ಹಾನಿ ಎಸಗಿದ್ದ. ಅಲ್ಲದೆ ಧರ್ಮಗುರುಗಳ ಪವಿತ್ರ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ.
ಅಲ್ಲೇ ವಾಸವಾಗಿದ್ದ ವಿದ್ಯಾರ್ಥಿಗಳು ಕೂಗಿದಾಗ ಧರ್ಮಗುರುಗಳ ಶ್ವೇತವಸ್ತ್ರವನ್ನು ಧರಿಸಿ ಓಡತೊಡಗಿದ. ಆದರೆ ಕೂಡಲೇ ಅಲ್ಲಿದ್ದವರು ಚರ್ಚಿನ ಗೇಟ್ ಹಾಕಿದ್ದರಿಂದ ಆತ ತಪ್ಪಿಸಿಕೊಳ್ಳಲಾಗಲಿಲ್ಲ. ಚರ್ಚಿನ ಆಡಳಿತ ಮಂಡಳಿಯವರು ಅಲ್ಲಿಗೆ ಬಂದು ಪರಿಶೀಲಿಸಿದ ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದು ದೇಶದ ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುವ ಘಟನೆ ಎಂದು ಬಿಷಪ್ ಬೇಸರ ವ್ಯಕ್ತಪಡಿಸಿದ್ದಾರೆ. ಯೇಸು ಮತ್ತು ಮೇರಿ ಮೂರ್ತಿಗಳಿಗೆ ಹಾನಿ ಉಂಟಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ಮಲಯಾಳಿ ಕ್ರಿಶ್ಚಿಯನ್ ಒಕ್ಕೂಟ ಒತ್ತಾಯಿಸಿದೆ.
ಜನಾರ್ಧನ ಪೂಜಾರಿ ಹೇಳಿಕೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಧುರೀಣ ಪೂಜಾರಿ, ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ. ಈ ಹಿಂದೆ ನಡೆದ ಚರ್ಚ್ ದಾಳಿಯ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಿದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications