ಶಾಸಕ ವೈ ಸಂಪಂಗಿ ಜಾಮೀನು ರದ್ದು, ಮತ್ತೆ ಜೈಲಿಗೆ
ವೈ ಸಂಪಂಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಆದೇಶಿಸಿದ್ದಾರೆ. ಹೀಗಾಗಿ ದೀಪಾವಳಿ ರಜೆ ಅನುಭವಿಸುತ್ತಿರುವ ಪರಪ್ಪನ ಅಗ್ರಹಾರದ ವಿವಿಐಪಿ ಕೈದಿಗಳ ಪಟ್ಟಿಯಲ್ಲಿ ಸಂಪಂಗಿ ಸಹ ಸೇರಲಿದ್ದಾರೆ.
ಕ್ಲೀನ್ ಚೀಟ್ ಪಡೆದಿದ್ದ ವೈ ಸಂಪಂಗಿ ಅವರಿಂದ ಬೆದರಿಕೆ ಕರೆ ಬಂದಿರುವುದಾಗಿ ಪ್ರಕರಣದ ಸಾಕ್ಷಿದಾರ ಹುಸೇನ್ ಮೊಯಿನ್ ಫರೂಕ್ ಅವರು ದೂರು ನೀಡಿದ್ದರು.
ದೂರು ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಜಾಮೀನು ರದ್ದು ಪಡಿಸಿ, ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ ಶಾಸಕ ಸಂಪಂಗಿ ಅವರನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾ. ಸುಧೀಂದ್ರ ರಾವ್ ಅವರು ಆದೇಶ ನೀಡಿದ್ದಾರೆ. ಸಾಕ್ಷಿಗಳ ವಿಚಾರಣೆ ಶನಿವಾರ ಅ.28ರಂದು ನಡೆಯಲಿದೆ.
ಏನಿದು ಪ್ರಕರಣ?: ಕೆಜಿಎಫ್ ನಲ್ಲಿ ಕಟ್ಟಡ ನಿರ್ಮಾಣ ವಿಷಯದಲ್ಲಿ ಅಯೂಬ್ ಹಾಗೂ ಫರೂಕ್ ಅವರಿಗೆ ವ್ಯಾಜ್ಯ ನಡೆದಿತ್ತು. ಒತ್ತಡಕ್ಕೆ ಒಳಗಾಗಿ ಅಯೂಬ್ ಅವರು ವಿಷ ಸೇವಿಸಿ ಆಸ್ಪತ್ರೆ ಸೇರಿಸಿದ್ದರು. ಇದರಿಂದ ಫರೂಕ್ ಅವರ ಕ್ರಿಮಿನಲ್ ಕೇಸ್ ದಾಖಲಾಗಿತ್ತು.
ಕೇಸ್ ನಿಂದ ಬಚಾವಾಗಲು ಶಾಸಕರ ಸಹಾಯ ಬಯಸಿ, 5 ಲಕ್ಷ ನೀಡಲು ಮುಂದಾಗಿದ್ದರು. ನಂತರ 50 ಸಾವಿರ ರು ನಗದು ಹಾಗೂ 4.5 ಲಕ್ಷ ರು ಮೊತ್ತದ ಚೆಕ್ ಹಿಡಿದು ಕೊಂಡು ಶಾಸಕರ ಕಚೇರಿ ಹೊಕ್ಕ ಫರೂಕ್, ಶಾಸಕ ಸಂಪಂಗಿ ಅವರಿಗೆ ಲಂಚ ನೀಡುತ್ತಿದ್ದಾಗ ಅಂದಿನ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರ ತಂಡ ಶಾಸಕರನ್ನು ತಮ್ಮ ಬಲೆಯಲ್ಲಿ ಕೆಡವಿಕೊಂಡಿದ್ದರು.