ಪಾವಗಡ ಮಾಜಿ ಶಾಸಕ ನಾಗಪ್ಪ ಪುತ್ರನಿಂದ ಪತ್ನಿ ಬೀದಿಪಾಲು

ವಂಚನೆಗೊಳಗಾದ ಆ ಮಹಿಳೆ ಪೊಲೀಸರಿಗೆ ದೂರು ನೀಡಿ, ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ದೇವರಾಜು ಅರಸು ಸರಕಾರವಿದ್ದ ಕಾಲದಲ್ಲಿ ಪಾವಗಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಗಪ್ಪ ಅವರ ಪುತ್ರ ಅನಿಲ್ಕುಮಾರ್ ಎಂಬಾತನೇ ಹೆಣ್ಣು ಮಗಳೊಬ್ಬಳಿಗೆ ಮೋಸ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ.
ವಂಚನೆ ವಿಷಯ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಧಾಕೃಷ್ಣ, ನಗರದ ಸ್ವಾಧಾರ ಕೇಂದ್ರದಲ್ಲಿ ವೆನ್ನಿಸಾ ಮತ್ತು ಆಕೆಯ ಮಗುವಿಗೆ ಆಶ್ರಯ ಕಲ್ಪಿಸಿದ್ದು, ವಂಚನೆ ಮಾಡಿರುವ ಮಾಜಿ ಶಾಸಕನ ಪುತ್ರನನ್ನು ಕರೆಯಿಸಿ ಕೌನ್ಸೆಲಿಂಗ್ ನಡೆಸಿ ಸಂಸಾರ ಒಂದು ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಏನಿದು ಪ್ರೇಮ ಪುರಾಣ: ಅನಿಲ್ ಕುಮಾರ್, 2008 ನೇ ಸಾಲಿನಲ್ಲಿ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಮಾರತ್ಹಳ್ಳಿಯ ಲೀನಾ ಮತ್ತು ಡೀನ್ ಎಂಬ ದಂಪತಿಯ ಪುತ್ರಿ ವೆನ್ನಿಸ್ ಎಂಬಾಕೆಯನ್ನು ಪ್ರೀತಿಸಿ ಹುಡುಗಿಯ ಅಪ್ಪ ಅಮ್ಮನ ಎದುರೇ ತಾಳಿ ಕಟ್ಟಿ ಮದುವೆಯ ನಾಟಕವಾಡಿದ್ದ. ವೆನ್ನಿಸ್ ಗರ್ಭಿಣಿಯಾಗಿದ್ದಾಗ ಅನಿಲ್ ಕುಮಾರ್ ತನ್ನ ಪತ್ನಿಯನ್ನು ಪಾವಗಡಕ್ಕೆ ಕರೆತಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ಮಾಡಿಸಿದ್ದರು. ಈಗ ಆ ಮಗುವಿಗೆ ಸುಮಾರು ಒಂದೂವರೆ ವರ್ಷವಾಗಿದೆ.
ಮಾಜಿ ಶಾಸಕ ನಾಗಪ್ಪ ಅವರ ಕುಟುಂಬವು ಮಗುವಾದ ನಂತರ ಸೊಸೆ ವೆನ್ನಿಸ್ ರನ್ನು ಗೃಹ ಬಂಧನದಲ್ಲಿ ಇಟ್ಟಿತ್ತು. ಈಗ ಸೊಸೆಯನ್ನು ಮನೆಯಿಂದ ಹೊರಹಾಕಲಾಗಿದೆ. ಇದಕ್ಕೆ ಪ್ರಮುಖ ಕಾರಣ ಮಗನಿಗೆ ಬೇರೊಂದು ಮದುವೆ ಮಾಡಿ ಹೆಚ್ಚಿನ ವರದಕ್ಷಿಣೆ ತರುವ ದುರಾಲೋಚನೆ ನಾಗಪ್ಪ ಅವರದ್ದಾಗಿದೆ. ೀ ಮದ್ಯೆ, ವೆನ್ನಿಸ್ ರನ್ನು ಆಕೆಯ ಅಜ್ಜಿ ಮನೆಯಲ್ಲಿ ಬಿಟ್ಟಿದ್ದು, ಆಸ್ತಿ ಮಾರಿ ಹಣ ತರುವಂತೆ ಪೀಡಿಸುತ್ತಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ವೆನ್ನಿಸಾ ಆರೋಪಿಸಿದ್ದಾರೆ.
ಮಾಜಿ ಶಾಸಕರ ಪುತ್ರನಿಂದ ಮೋಸ ಹೋಗಿ ರುವ ಹೆಣ್ಣು ಮಗಳ ತಾಯಿಯೂ ಇತ್ತೀಚೆಗೆ ತೀರಿಕೊಂಡಿದ್ದು ತಂದೆ ಬೇರೊಂದು ಮದುವೆ ಮಾಡಿಕೊಂಡ ಕಾರಣ ತಂದೆಯ ಬಳಿಯೂ ಆಶ್ರಯವಿಲ್ಲದೆ, ಗಂಡನ ಮನೆಯಲ್ಲಿಯೂ ಆಶ್ರಯ ವಿಲ್ಲದೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಹೆಣ್ಣು ಮಗಳೊಬ್ಬಳನ್ನು ವಂಚಿಸಿರುವ ಮಾಜಿ ಶಾಸಕನ ಪುತ್ರ ಮತ್ತು ಆತನ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವಾರು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.












Click it and Unblock the Notifications