ಯಡಿಯೂರಪ್ಪ ಬಂಧನದಿಂದ ಮುಜುಗರ; ಪಕ್ಷ ಮೊದಲೇ ಎಚ್ಚರಿಸಿತ್ತು: ಅಡ್ವಾಣಿ

ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಅಡ್ವಾಣಿ ಮೊದಲು ಯಡಿಯೂರಪ್ಪನವರ ಕುರಿತಾದ ಪ್ರಶ್ನೆಗಳಿಂದ ಜಾರಿಕೊಳ್ಳಲು ಯತ್ನಿಸಿದರು. ಆದರೆ ಬಳಿಕ ಅವರ ಬಂಧನದಿಂದಾಗಿ ಪಕ್ಷಕ್ಕೆ ಮುಜುಗರವಾಗಿದೆಯೆಂಬುದನ್ನು ಅವರು ಒಪ್ಪಿಕೊಂಡರು.
'ನಾವು ನಮ್ಮ ಆಂತರಿಕ ದೌರ್ಬಲ್ಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಅದನ್ನು ನಾವು ಕರ್ನಾಟಕದಲ್ಲಿ ಸ್ಪಷ್ಟವಾಗಿ ಎತ್ತಿ ಹಿಡಿದಿದ್ದೇವೆ. ನಾವು ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದೆವು.
ಆದರೆ, ಅಕ್ರಮ ಗಣಿಗಾರಿಕೆಯ ಕುರಿತ ಲೋಕಾಯುಕ್ತ ವರದಿ ಬಂದಾಗ ಅವರು ಅಧಿಕಾರ ತ್ಯಜಿಸಲೇಬೇಕಾಯಿತು. ಇತರರ ಸಣ್ಣ ತಪ್ಪುಗಳು ಪಕ್ಷದ ನಾಯಕತ್ವವನ್ನು ಮುಜುಗರಕ್ಕೆ ಸಿಲುಕಿಸುತ್ತಿವೆ. ಜಾರುವ ಪ್ರಮೇಯ ಬರಬಹುದು. ಆದುದರಿಂದ ನಾನು ಎಚ್ಚರಿಕೆಯಿಂದಿರುವಂತೆ ಪಕ್ಷದ ಎಲ್ಲರಿಗೂ ಹೇಳುತ್ತಿದ್ದೇನೆ" ಎಂದು ಅಡ್ವಾಣಿ ಹೇಳಿದರು.
ಆದರೆ, ಬಿಜೆಪಿಯೂ ಇಂಥ ದೌರ್ಬಲ್ಯಗಳಿಂದ ನರಳಿದಲ್ಲಿ 'ಭ್ರಷ್ಟ' ಕಾಂಗ್ರೆಸ್ ಎದುರು ಜನರ ವಿಶ್ವಾಸ ಗಳಿಸಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಲಿಕ್ಕಿಲ್ಲವೆಂದು ಪಕ್ಷಕ್ಕೆ ಪೂರ್ಣ ಅರಿವಿದೆ ಎಂದರು.
ಅಡ್ವಾಣಿಗೆ ಕಾಡುತ್ತಿದೆ ಪ್ರಮೋದ್ ಮಹಾಜನ ಅನುಪಸ್ಥಿತಿ:
ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರನ್ನು ಕಳಕೊಂಡಂತೆ ನಿಮಗೆ ಅನಿಸುತ್ತಿದೆಯೇ ಎಂದು ಕೇಳಿದಾಗ ಅವರು, ತನ್ನ ಪ್ರಥಮ ರಥಯಾತ್ರೆ ಮಹಾಜನ್ ಅವರದ್ದೇ ಸಲಹೆಯಾಗಿತ್ತು. ರಾಮಮಂದಿರ ವಿಚಾರವನ್ನು ಪ್ರಚುರಪಡಿಸಲು ಆರಂಭದಲ್ಲಿ ತಾನು ಸೋಮನಾಥದಿಂದ ಅಯೋಧ್ಯೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದೆ ಮತ್ತು ಒಂದು ತಿಂಗಳಲ್ಲಿ ಅದನ್ನು ಪೂರ್ಣಗೊಳಿಸಲು ಬಯಸಿದ್ದೆ.
ಆದರೆ ಹೆಚ್ಚು ರಾಜ್ಯಗಳ ಮೂಲಕ ಹಾದುಹೋಗುವುದಕ್ಕೆ ಸಾಧ್ಯವಾಗುವಂತಾಗಲು ವಾಹನವೊಂದನ್ನು ತೆಗೆದುಕೊಳ್ಳುವಂತೆ ಮಹಾಜನ್ ಸಲಹೆಯಿತ್ತರು. ಯಾತ್ರೆಗೆ ವಿಶೇಷ ರಥ ರೂಪಿಸಲು ಕೂಡ ಅವರೇ ಕಾರಣರಾಗಿದ್ದರು ಎಂದರು.












Click it and Unblock the Notifications