ಯಡಿಯೂರಪ್ಪಗೆ ಜೈಲು: ಯಾರು ಏನು ಹೇಳಿದರು

ಈ ಕುರಿತು ಹಿರಿಯ ನ್ಯಾಯವಾದಿ ಸುಬ್ಬಯ್ಯ ಮಾತನಾಡಿ "ಯಡಿಯೂರಪ್ಪ ಅವರಿಗೆ ಅರೆಸ್ಟ್ ವಾರಂಟ್ ಜಾರಿಯಾಗಿದ್ದು ನಿರೀಕ್ಷಿತವೇ ಆಗಿದೆ. ಇದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಅವರ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಅವರಿಗೆ ದೊರೆತ ಪ್ರತಿಫಲ ಇದು" ಎಂದಿದ್ದಾರೆ.
ಮಾಜಿ ಸಚಿವ ನಾಣಯ್ಯ ಮಾತನಾಡಿ "ಅವರ ಅಧಿಕಾರದ ಅವಧಿಯಲ್ಲಿ ಯಡಿಯೂರಪ್ಪ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಭ್ರಷ್ಟಾಚಾರಕ್ಕೆ ಬಹಳಷ್ಟು ಕುಮ್ಮಕ್ಕು ನೀಡಿದ್ದಾರೆ. ಅವರ ಸ್ವಜನ ಪಕ್ಷಪಾತವಂತೂ ಮಿತಿ ಮೀರಿತ್ತು. ಹಾಗಾಗಿ ಯಡಿಯೂರಪ್ಪ ಬಂಧನವಾದರೆ ಅದು ಭ್ರಷ್ಟಾಚಾರದ ವಿರುದ್ಧ ಸಿಕ್ಕ ಜಯ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, "ಈ ಪ್ರಕರಣದಿಂದ ಜನಪ್ರತಿನಿಧಿಗಳು, ರಾಜಕಾರಣಿಗಳು ತಲೆತಗ್ಗಿಸುವಂತಾಗಿದೆ. ಶಿವಮೊಗ್ಗಾದಲ್ಲಿ ಕಾಂಗ್ರಸ್ ನಾಯಕರು ಕೇಕೆ ಹಾಕಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಅವರ ಈ ವರ್ತನೆ ಕೇಂದ್ರದಲ್ಲಿನ ಕಾಂಗ್ರೆಸ್ ನಾಯಕರ ಧೋರಣೆಯನ್ನು ಪ್ರತಿನಿಧಿಸುವಂತಿದೆ. ವೈಯಕ್ತಿಕವಾಗಿ ನನಗೆ ಈ ಘಟನೆ ಸಂತಸ ತಂದಿಲ್ಲ. ಯಡಿಯೂರಪ್ಪ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ" ಎಂದಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ "ಯಡಿಯೂರಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನಿನ ಈ ಕ್ರಮ ಸರಿಯಾದುದೇ ಆಗಿದೆ. ಅವರಿಗೆ ಶಿಕ್ಷೆ ಆಗಲೇಬೇಕು" ಎಂದಿದ್ದಾರೆ.
ಇನ್ನು ಬಸವರಾಜ ಹೊರಟ್ಟಿಯವರು "ಬಿಜೆಪಿಯಲ್ಲಿ ಹಲವರು ಅಕ್ರಮ ಎಸಗಿದ್ದಾರೆ. ಒಬ್ಬಬ್ಬರಾಗಿ ಜೈಲು ಸೇರುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು" ಎಂದಿದ್ದಾರೆ.
ಸಿದ್ಧರಾಮಯ್ಯನವರು "ಈಶ್ವರಪ್ಪನವರಿಗೆ ಸ್ವಾಭಿಮಾನ ಇಲ್ಲ. ಬಿಜೆಪಿಯನ್ನು ಈಶ್ವರಪ್ಪ ಯಡಿಯೂರಪ್ಪನವರ ಕಾಲಿಗೆ ಕಟ್ಟಿದ್ದಾರೆ. ಯಡಿಯೂರಪ್ಪ ಪ್ರಕರಣ ಮುಂದೆ ಆಡಳಿತ ನಡೆಸುವವರಿಗೆ ಎಚ್ಚರಿಕೆಯ ಗಂಟೆ" ಎಂದು ಹೇಳಿದ್ದಾರೆ.












Click it and Unblock the Notifications