ಭೈರಪ್ಪ ವಿರೋಧಿ ಹೇಳಿಕೆಗೆ ಸಾಹಿತಿಗಳ ಖಂಡನೆ
ಕರ್ನಾಟಕದಲ್ಲಿ ಯಾರಿಗೆ ಆಗಲಿ ಜ್ಞಾನಪೀಠ ಪ್ರಶಸ್ತಿ ಬಂದರೆ ಅದು ಕನ್ನಡಕ್ಕೆ ಸಂದ ಪ್ರಶಸ್ತಿ. ಈ ಬಾರಿ ಅದು ಕಂಬಾರರ ಮೂಲಕ ಕನ್ನಡಕ್ಕೆ ಬಂದಿದೆ. ಈ ಬಗ್ಗೆ ಹೆಮ್ಮೆ ಪಡಬೇಕು. ಅದನ್ನು ಬಿಟ್ಟು ಇನ್ಯಾರಿಗೋ ಜ್ಞಾನಪೀಠ ಪ್ರಶಸ್ತಿ ಸಿಗಬಾರದು, ಮರಣೋತ್ತರ ಪ್ರಶಸ್ತಿ ಸಿಗಲಿ ಎಂದು ಹೇಳುವುದು ಅಕ್ಷಮ್ಯ, ಯಾರೇ ಆಗಲಿ ಇಂತಹ ಮಾತುಗಳನ್ನು ಆಡಬಾರದು ಎಂದು ಡಾ. ಜಿಎಸ್ ಶಿವರುದ್ರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಪು ಹೇಳಿಕೆ: ನಿಡುಮಾಮಿಡಿ ಸ್ವಾಮೀಜಿಗಳು ಆಲೋಚಿಸಿ ಮಾತನಾಡುವುದರೆ ಒಳ್ಳೆಯದು. ಮರಣೋತ್ತರ ಪ್ರಶಸ್ತಿ ಸಿಗಲಿ ಎಂದು ಹಾರೈಸುವುದು ಕೆಟ್ಟ ಸಂದೇಶವನ್ನು ಸಾರಿದ್ದಂತಾಗುತ್ತದೆ ಎಂದು ಡಾ. ಪಾಟೀಲ್ ಪುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಲ್ಲೂರು ಪ್ರಸಾದ್: ಭೈರಪ್ಪ ಅವರಿಗೆ ಜ್ಞಾನಪೀಠ ಸಿಗುವ ಬಗ್ಗೆ ಶ್ರೀಗಳಿಗೆ ಮಾತನಾಡುವ ಹಕ್ಕಿಲ್ಲ. ಪ್ರಶಸ್ತಿ ವಿಷಯದಲ್ಲಿ ಸಾಹಿತಿಗಳನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.
ಜ್ಞಾನ ಪೀಠ ಪ್ರಶಸ್ತಿ ಸಮಿತಿಯ ಮಾಜಿ ಸಂಚಾಲಕರಾದ ಡಾ. ಗಿರಡ್ಡಿ ಗೋವಿಂದ ರಾಜ ಅವರ ಅಭಿಪ್ರಾಯದಂತೆ ಮರಣೋತ್ತರ ಪ್ರಶಸ್ತಿ ನೀಡುವ ಸಂಪ್ರದಾಯವಿಲ್ಲ. ಎಸ್ ಎಲ್ ಭೈರಪ್ಪ ಅವರಿಗೆ ಜ್ಞಾನಪೀಠದಷ್ಟೇ ಮಹತ್ವವಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಿಕ್ಕಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಸರಿಯಾದ ಪ್ರಚಾರ ನೀಡಲಿಲ್ಲ ಅಷ್ಟೆ ಎಂದು ಹೇಳಿದ್ದಾರೆ.
ಭಾನು ಮುಷ್ತಾಕ್: ಭೈರಪ್ಪ ಅವರ ವಿಚಾರ ಏನೇ ಇರಲಿ. ಅವರ ಬಗ್ಗೆ ಶ್ರೀಗಳು ಮಾತನಾಡಿರುವುದು ಬೇಸರ ತರಿಸಿದೆ ಎಂದಿದ್ದಾರೆ.
ಒಟ್ಟಾರೆ, ಪ್ರಶಸ್ತಿ, ಫಲಕದಿಂದಲೇ ಸಾಹಿತಿಗಳನ್ನು ತೂಗಿ ನೋಡುವ ಕೆಟ್ಟ ಚಾಳಿ ಮತ್ತೊಮ್ಮೆ ಕನ್ನಡ ಸಾಹಿತ್ಯ ಲೋಕವನ್ನು ಅಪ್ಪಳಿಸಿದೆ.