ಜಂಬೂ ಸವಾರಿ ಪ್ರಯುಕ್ತ ಕಂಡರಿಯದ ಬಂದೋಬಸ್ತ್

ಈ ನಡುವೆ ದೇಶದ ಕೆಲವೆಡೆಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳ ಕರಿಛಾಯೆಯೂ ಮೈಸೂರು ದಸರಾದ ಮೇಲೆ ದುಷ್ಪರಿಣಾಮ ಬೀರಿದೆ. ಹಿಂದಿನ ದಸರಾಗಳಿಗೆ ಹೋಲಿಸಿದರೆ ಈ ಬಾರಿ ಮೈಸೂರಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಕಡಿಮೆಯೇ. ಹಲವು ಹೋಟೆಲ್ಗಳು ಇನ್ನೂ ಕೂಡ ಖಾಲಿಯಾಗಿಯೇ ಇವೆ. ಇದಕ್ಕೆ ಈ ಬಾರಿ ದಸರಾ ರಜೆ ವಿದ್ಯಾರ್ಥಿಗಳಿಗೆ ತಡವಾಗಿ ನೀಡಿರುವುದು ಕಾರಣವಾಗಿರಬಹುದು. ಆದರೆ ದಸರಾದಲ್ಲಿ ಜನತೆ ಯಾವುದೇ ರೀತಿಯ ಭಯ, ಆತಂಕವಿಲ್ಲದೆ ಪಾಲ್ಗೊಳ್ಳಲು ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಿದೆ.
ಈಗಾಗಲೇ ಬಾಂಬ್ ಪತ್ತೆದಳ ಹಾಗೂ ಶ್ವಾನದಳ ನಗರದಾದ್ಯಂತ ಕಾರ್ಯಾಚರಿಸುತ್ತಿದ್ದು, ಅನುಮಾನ ಬಂದ ಕಡೆಗಳಲೆಲ್ಲಾ ಶೋಧನಾ ಕಾರ್ಯ ನಡೆಸುತ್ತಿವೆ. ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆತಲ್ಲಿಂದ ಇಲ್ಲಿಯವರೆಗೂ ದಿನಕ್ಕೆರಡು ಬಾರಿ ಜಂಬೂ ಸವಾರಿ ನಡೆಯುವ ಮಾರ್ಗದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇನ್ನು ಅರಮನೆ, ಮೃಗಾಲಯ, ಜಗನ್ಮೋಹನ ಅರಮನೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ನೇತೃತ್ವದಲ್ಲಿ ಎಲ್ಲೆಡೆ ತಪಾಸಣೆ ನಡೆಯುತ್ತಿದ್ದು, ನಗರಕ್ಕೆ ಬರುವ ಮತ್ತು ಹೋಗುವ ಕಡೆಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ತಪಾಸಣಾ ಕಾರ್ಯದಲ್ಲಿ ಬಾಂಬ್ ಪತ್ತೆದಳ ಲೋಹ, ಶೋಧಕ ಉಪಕರಣಗಳೊಂದಿಗೆ 12 ಶ್ವಾನಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು, ತಪಾಸಣಾ ಕಾರ್ಯ ನಗರದೊಳಗೆ ನಿರಂತರವಾಗಿ ನಡೆಯುತ್ತಿದೆ. ಅಲ್ಲದೆ ಬುಧವಾರದಂದು ರಾತ್ರಿ ಅರಮನೆ ಸೇರಿದಂತೆ ನಗರದಾದ್ಯಂತ ಏಕಕಾಲದಲ್ಲಿ ವಿಧ್ವಂಸಕ ಕೃತ್ಯ ತಡೆ ತಂಡ ಶೋಧ ನಡೆಸಲಿದೆ.
ದಸರಾ ಭದ್ರತೆಗಾಗಿ ಮೈಸೂರಿಗೆ ಮೊದಲ ಹಂತದಲ್ಲಿ 4,000 ಪೊಲೀಸರು ಆಗಮಿಸಿದ್ದು, ಆಯುಧ ಪೂಜೆ ಹಾಗೂ ಜಂಬೂ ಸವಾರಿಯ ಸಂದರ್ಭ ಭದ್ರತೆಗಾಗಿ ಇನ್ನು 1,000 ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ದಳದ ಮೂರು ತುಕಡಿಗಳು ಆಗಮಿಸಲಿವೆ. ಒಟ್ಟಾರೆ ಎಲ್ಲೆಡೆಯೂ ಬಿಗಿ ಪೊಲೀಸ್ ಪಹರೆಯಿದ್ದು ಜನರು ಯಾವುದೇ ಆತಂಕಗಳಿಲ್ಲದೆ ದಸರಾದಲ್ಲಿ ಪಾಲ್ಗೊಳ್ಳಲು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications