ಮಂಗಳೂರಲ್ಲಿ ವಿಧವೆಯರ ಕ್ರಾಂತಿಕಾರಿ ಹೆಜ್ಜೆ

ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರ ಆಹ್ವಾನ ಸ್ವೀಕರಿಸಿ ಪತಿಯನ್ನು ಕಳೆದುಕೊಂಡ ಸುಮಾರು 2,500 ಮಹಿಳೆಯರು ಕ್ಷೇತ್ರಕ್ಕೆ ಧಾವಿಸಿ ಬಂದಿದ್ದರು. ಇವರೆಲ್ಲರೂ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಬೆಳ್ಳಿ ರಥವನ್ನು ಅವರೇ ಎಳೆದರು. ಪತಿಯನ್ನು ಕಳೆದುಕೊಂಡ ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹೋಮವನ್ನು ಪ್ರಾರಂಭಿಸಲಾಯಿತು.
ಹೋಮದ ಸಂಕಲ್ಪ ವಿಧಿಯನ್ನು ನೆರವೇರಿಸಿ ಮಾತನಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರು, ಭಾರತದ ಇತಿಹಾಸದಲ್ಲಿ ವಿಶೇಷ ದಿನ. ಮಹಿಳೆಯರಿಗೆ ಮಾತೃ ಸ್ಥಾನವನ್ನು ನೀಡಿ ಪೂಜ್ಯಭಾವನೆಯಿಂದ ಕಂಡ ನಮ್ಮ ನಾಡಿನಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಅಗೌರವದಿಂದ ನಡೆಸಿಕೊಳ್ಳುವ ಪದ್ಧತಿ ಸರಿಯಲ್ಲ. ಶ್ರೀ ಕ್ಷೇತ್ರದ ದೇವರ ಕೃಪೆಯಿಂದ ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪರಿವರ್ತನೆಯೊಂದಕ್ಕೆ ನಾಂದಿ ಹಾಡಲಾಗುತ್ತಿದೆ ಎಂದರು.
ಮೇಲು ಕೀಳು ಎನ್ನುವ ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಟೆದು ನಿಂತು ಸಮಾಜ ಸುಧಾರಣೆ ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದ ಕುದ್ರೋಳಿ ಕ್ಷೇತ್ರದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿಯಾಗಿದೆ.












Click it and Unblock the Notifications