ಗೋಗಿ ಗ್ರಾಮಸ್ಥರ ಬದುಕು ಕಸಿಯುತ್ತಿದೆ ಯುರೇನಿಯಂ

ಆ ಹೆಲಿಕಾಪ್ಟರ್ ಬಂದಿದ್ದೇ ಯುರೇನಿಯಂ ನಿಕ್ಷೇಪವನ್ನು ಪತ್ತೆಹಚ್ಚಲೆಂದು, ಗಣಿಗಾರಿಕೆ ಮಾಡಲೆಂದು. ಯುರೇನಿಯಂ ಎಂದರೇನೇ ತಿಳಿಯದ ಮುಗ್ಧ ಗ್ರಾಮಸ್ಥರು ಇನ್ನು ನಿಕ್ಷೇಪದ ಬಗ್ಗೆ ಏನು ತಿಳಿದಾರು? ಆದರೆ, ಅದೇ ಯುರೇನಿಯಂ ಅವರ ಜೀವನವನ್ನು ಸರ್ವನಾಶ ಮಾಡುತ್ತಿದೆ.
ಗೋಗಿ ಗ್ರಾಮದಲ್ಲಿ 1996-97ರಿಂದ ಯುರೇನಿಯಂ ನಿಕ್ಷೇಪವನ್ನು ಪತ್ತೆ ಹಚ್ಚಿ, ಪರೀಕ್ಷಾರ್ಥವಾಗಿ ಯುರೇನಿಯಂ ಗಣಿಗಾರಿಕೆ ಮಾಡಲಾಗುತ್ತಿದೆ. ಇದಕ್ಕಾಗಿ 40 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ಮುಂದಾಗಿದೆ. 550 ಕೋಟಿ ರು. ಬಂಡವಾಳ ಹೂಡಿ, 1.50 ಲಕ್ಷ ಟನ್ನಷ್ಟು ಯುರೇನಿಯಂ ಹೊರತೆಗೆಯಲು ಉದ್ದೇಶಿಸಿದೆ. ಈಗಾಗಲೇ ರಾಜ್ಯ ಸರಕಾರ ಅನುಮತಿ ಕೊಟ್ಟಿದೆ. ಕೇಂದ್ರ ಪರಿಸರ ಇಲಾಖೆಯಿಂದ ಮಾತ್ರ ಇನ್ನೂ ಪರವಾನಿಗೆ ಸಿಕ್ಕಿಲ್ಲ.
ಪರೀಕ್ಷಾರ್ಥವಾಗಿ ಆರಂಭಿಸಲಾಗಿರುವ ಯುರೇನಿಯಂ ಗಣಿಗಾರಿಕೆಯಿಂದ ಗೋಗಿ ಗ್ರಾಮದಲ್ಲಿ ಕ್ಯಾನ್ಸರ್, ಅಸ್ತಮಾ, ಕಾಲರಾ ಮುಂತಾದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಜನರು ಕುಡಿಯುವ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಯುರೇನಿಯಂ ಗಣಿಗಾರಿಕೆಯಿಂದ ಗೋಗಿ ಗ್ರಾಮ ಸಂಪೂರ್ಣವಾಗಿ ನಲುಗಿ ಹೋಗಿದೆ.
ಕೆಲ ಪ್ರಜ್ಞಾವಂತ ರೈತರು ಮುಂದಿನ ದಿನಗಳಲ್ಲಿ ಯುರೇನಿಯಂ ವಿಕಿರಣದಿಂದ ತಮ್ಮ ಗ್ರಾಮಕ್ಕೆ ಕೇಡಾಗಬಹುದು ಎಂದು ಜಮೀನುಗಳನ್ನು ಕೊಡಲು ಮುಂದಾಗುತ್ತಿಲ್ಲ. ಆದರೆ ಇನ್ನೊಂದೆಡೆ ಯುರೇನಿಯಂ ಗಣಿಗಾರಿಕೆಯಿಂದ ಯಾವುದೇ ಸ್ಥಳೀಯರ ಮೇಲೆ ಯಾವುದೇ ರೀತಿ ದುಷ್ಪರಿಣಾಮವಿಲ್ಲ ಅಂತಾರೆ ಯಾದಗಿರಿ ಜಿಲ್ಲಾಧಿಕಾರಿ ಗುರುನೀತ ತೇಜ ಮೇನನ್.
ಸ್ಥಳೀಯರ ಒತ್ತಾಯದ ಮೇರೆಗೆ ಇಬ್ಬರು ತಜ್ಞ ವೈದ್ಯರಾದ ಡಾ.ಮುದಕವಿ, ಡಾ.ಶೇಖರ ಪಾಟೀಲ್ ತಂಡವನ್ನು ತಯಾರಿಸಿ, ಸರ್ಕಾರಕ್ಕೆ ಗಣಿಗಾರಿಕೆ ನಡೆಸದಂತೆ ವರದಿ ಸಲ್ಲಿಸಿದ್ದರೂ ಸಹಿತ ಸರಕಾರ ಯುರೇನಿಯಂ ಗಣಿಗಾರಿಕೆಗೆ ಒಪ್ಪಿಗೆ ಸೂಚಿಸಿದ್ದು, ಗೋಗಿ ಗ್ರಾಮಸ್ಥರನ್ನು ಆತಂಕಕ್ಕೆ ಈಡು ಮಾಡಿದೆ.












Click it and Unblock the Notifications