ಅಕ್ರಮ ಗಣಿ ಸಂಪತ್ತು ಮುಟ್ಟುಗೋಲಿಗೆ ಎಸ್.ಆರ್. ಹಿರೇಮಠ ಆಗ್ರಹ
ಇಲ್ಲಿನ ಮುರುಘಾಮಠದಲ್ಲಿ ಭಾನುವಾರ ಜನ ಸಂಗ್ರಾಮ ಪರಿಷತ್ ಏರ್ಪಡಿಸಿದ್ದ 'ಜನ ಸಂಗ್ರಾಮ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಸಂತೋಷ್ ಹೆಗ್ಡೆ ವರದಿ ಅನ್ವಯ ಗಣಿ ಅಕ್ರಮದಲ್ಲಿ ಭಾಗಿಯಾದ ಜನಪ್ರತಿನಿಧಿಗಳು ಹಾಗೂ 700 ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಅಕ್ರಮ ಗಣಿಗಾರಿಕೆ ಗಂಭೀರ ವಿಚಾರ. ಆದ್ದರಿಂದ ಇದರ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಎಲ್ಲ ಸರಕಾರಗಳೂ ಸಿಬಿಐಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತವೆ. ಹಿಂದೆ ಎನ್ಡಿಎ ಸರಕಾರ ಕೂಡ ಸಿಬಿಐಯನ್ನು ದುರುಪಯೋಗಪಡಿಸಿಕೊಂಡಿದ್ದಿದೆ.
ಜನರು ನೀಡಿದ ಅಧಿಕಾರಕ್ಕೆ ಜವಾಬ್ದಾರಿಯಿದೆ. ಅದನ್ನು ಜನಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕು. ಭ್ರಷ್ಟಾಚಾರ ಯಾರೇ ಮಾಡಿರಲಿ ಅವರ ವಿರುದ್ಧ ಜನ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಸಂತೋಷ ಹೆಗ್ಡೆ ನೀಡಿರುವ ವರದಿಯಿಂದ ರಾಜ್ಯದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಅಕ್ರಮ ಗಣಿಗಾರಿಕೆಯಿಂದ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿದ್ದಲ್ಲದೆ ಕಾರ್ಯಾಂಗದ ಮೇಲೂ ದುಷ್ಪರಿಣಾಮ ಉಂಟಾಗಿದೆ ಎಂದು ವಿಷಾದಿಸಿದ ಅವರು, ನೈಸರ್ಗಿಕ ಸಂಪನ್ಮೂಲ ಕೆಲವರ ಸ್ವತ್ತಲ್ಲ. ಸಮಾಜದ ಆಸ್ತಿಯಾಗಿರುವ ಇದರ ಮೇಲೆ ಕೆಲವರಿಗೆ ಮಾತ್ರ ಹಕ್ಕು ನೀಡುವುದು ಸೂಕ್ತವಲ್ಲ. ನೀರು, ಅರಣ್ಯ, ಭೂಮಿ, ಖನಿಜ ಹಾಗೂ ಬೀಜ ನೈಸರ್ಗಿಕ ಸಂಪನ್ಮೂಲ ಆಯಾ ಗ್ರಾಮಸ್ಥರ ಅಧೀನದಲ್ಲಿರಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಕೃತಿ ಲೂಟಿ ಮಾಡುವವರ ವಿರುದ್ಧ ಎಸ್.ಆರ್.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮೆಚ್ಚುವಂಥದ್ದು. ನೈಸರ್ಗಿಕ ಸಂಪತ್ತಿನ ರಕ್ಷಣೆ ಕಾರ್ಯ ದೇಶದೆಲ್ಲೆಡೆ ನಡೆಯಬೇಕು. ಖನಿಜ ಸಂಪತ್ತು ಲೂಟಿ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಲೂಟಿ ನಿರಂತರವಾಗಿ ಮುಂದುವರೆಯುತ್ತದೆ.
ತಪ್ಪಿತಸ್ಥರಿಗೆ ನೀಡಿದ ಶಿಕ್ಷೆ ಇತರರಿಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು. ಹೋರಾಟ ಇಲ್ಲದಿದ್ದರೆ ಭಯ, ಭೀತಿ ಇರುವುದಿಲ್ಲ. ಆದ್ದರಿಂದ ಜನರು ಸಂಘಟಿತರಾಗಿ ಹೋರಾಟಕ್ಕಿಳಿಯಬೇಕು ಎಂದರು.
ಬಸವರಾಜ ಗೊಡಚಿ, ಎಫ್.ಬಿ. ಹಬೀಬ, ಡಿ.ಎಸ್. ಕಲ್ಮಠ, ಬಿ.ಎಂ. ಹನಸಿ, ಗೌಸ್ ಮೋದಿನ ಹಂಚಿನಮನಿ, ಶ್ರೀಕಾಂತ ಹುಲಮನಿ, ಕಿರಣ ಹಿರೇಮಠ, ಈರಪ್ಪ ಪೂಜಾರ ಎಂ.ಡಿ. ಪಾಟೀಲ ಮೊದಲಾದವರು ಭಾಗವಹಿಸಿದ್ದರು.