ಸೂಪರ್ ಪವರ್ ಬಳಕೆ ರಾಹುಲ್ ಗೆ ಗೊತ್ತೆ?
ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಮುಕುಲ್ ವಾಸ್ನಿಕ್, ಮಾಜಿ ಸಚಿವ ಕೆ ಹಂಡಿಕ್ ಹಾಗೂ ಗಿರೀಶ್ ವ್ಯಾಸ್ ರಂಥ ಹಿರಿಯ ನಾಯಕರನ್ನು ರಾಹುಲ್ ಬೆನ್ನ ಹಿಂದೆ ನಿಲ್ಲಿಸಿರುವ ಸೋನಿಯಾ ಮಹಾ ಯುದ್ಧಕ್ಕೆ ಈಗಲೇ ಅಣಿಯಾಗುತ್ತಿದ್ದಾರೆ.
ಆನಾರೋಗ್ಯದಿಂದ ಬಳಲುತ್ತಿದ್ದ ಸೋನಿಯಾಜಿ ಯುಎಸ್ ನಿಂದ ಭಾರತಕ್ಕೆ ಬಂದ ತಕ್ಷಣ ಸಿಇಸಿ ಸಮಿತಿ ಸಭೆ ನಡೆಸಿ, ರಾಹುಲ್ ಸೇರ್ಪಡೆಯನ್ನು ಘೋಷಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್, ಪ್ರಣಬ್ ಮುಖರ್ಜಿ, ಎಕೆ ಅಂಟನಿ, ಅಂಬಿಕಾ ಸೋನಿ, ಜನಾರ್ದನ ದ್ವಿವೇದಿ, ಫೊತೆದಾರ್, ಮೊಹ್ಸಿನಾ ಕಿದ್ವಾಣಿ, ಆಸ್ಕಾರ್ ಫರ್ನಾಂಡೀಸ್ ಹಾಗೂ ಅಶೋಕ್ ರಾಮ್ ಇರುವ ಸಮಿತಿ ರಾಹುಲ್ ಸೇರ್ಪಡೆಯಿಂದ ಹರ್ಷಗೊಂಡಿದ್ದಾರೆ.
ಯುವ ಜನಾಂಗವೇ ರಾಹುಲ್ ಶಕ್ತಿ: ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಯೂನಿಯನ್ ಗಳನ್ನು ಸಂಭಾಳಿಸುತ್ತಿರುವ ರಾಹುಲ್ ಈಗ ಹಿರಿಯ ನಾಯಕರ ಸರಿ ಸಮಾನಾಗಿ ಅಭ್ಯರ್ಥಿಗಳ ಆಯ್ಕೆ ಮಾಡಬಹುದಾಗಿದೆ.
ರಾಹುಲ್ ಸೇರ್ಪಡೆಗೆ ಬಲವಾದ ಕಾರಣವೂ ಇದೆ. ಯುಎಸ್ ಗೆ ತೆರಳುವ ಮುನ್ನ ಸೋನಿಯಾ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಕಾರ್ಯ ನಿರ್ವಹಿಸುತ್ತಿದ್ದ ಜನಾರ್ದನ ದ್ವಿವೇದಿ, ಅಹ್ಮದ್ ಪಟೇಲ್ ಹಾಗೂ ಎಕೆ ಅಂಟನಿ ಅವರ ಕಾರ್ಯ ನಿರ್ವಹಣೆ ವೈಖರಿ ಬಗ್ಗೆ ಸೋನಿಯಾಗೆ ಅಷ್ಟಾಗಿ ಮೆಚ್ಚುಗೆಯಾಗಿಲ್ಲ.
ಸ್ವತಃ ರಾಹುಲ್ ಕೂಡಾ ಅಣ್ಣಾ ಹಜಾರೆ ವಿಷಯದಲ್ಲಿ ಕೈ ಚೆಲ್ಲಿ ನಿಂತರು. ಆದರೆ, ಕರ್ತವ್ಯದಿಂದ ವಿಮುಖರಾದ ರಾಹುಲ್ ಗೆ ಭಾರಿ ಅಧಿಕಾರಿ ನೀಡುವ ಮೂಲಕ ಹುರಿದುಂಬಿಸಲು ಅಮ್ಮ ಸೋನಿಯಾ ಚಿಂತಿಸಿದ್ದಾರೆ.
ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿ ಯುವಪಡೆಯನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ತಕ್ಕಮಟ್ಟಿನ ಯಶಸ್ಸು ಕಂಡಿರುವ ರಾಹುಲ್ ಗೆ ಉತ್ತರದಲ್ಲಿ ರೈತರ ಬೆಂಬಲ ಸಿಗುತ್ತದೆ ಎಂಬ ನಂಬಿಕೆಯಿದೆ. ಕೇಂದ್ರ ಸಂಪುಟದಲ್ಲಿ ಯುವ ನೇತಾರರನ್ನು ಸೇರಿಸುವಲ್ಲಿ ಯಶಸ್ವಿಯಾದ ರಾಹುಲ್ ಗೆ ಈಗ ಅಗ್ನಿಪರೀಕ್ಷೆ ಆರಂಭವಾಗಿದೆ. ಆದರೆ. ರಾಹುಲ್ ಗೆ ತನ್ನ ಪದವಿ ಸಂಭಾಳಿಸುವ ತಾಕತ್ತು ಇದೆಯೇ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.