ಸಾಮರ್ಥ್ಯ ತೋರಲಿ ನಂತರ ಜೆಡಿಎಸ್ ಸೇರಲಿ
ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ಸ್ಪೀಕರ್ ಬೋಪಯ್ಯ ಶ್ರೀರಾಮುಲು ರಾಜೀನಾಮೆ ಅಂಗೀಕರಿಸಿದ್ದರೆ, ಪೂರ್ವಭಾವಿಯಾಗಿ ನಿರ್ಧರಿಸಿದಂತೆ ಹೊಸ ಪಕ್ಷದಿಂದ ಸ್ಪರ್ಧಿಸಲಿದ್ದರು. ಆಗ, ಈ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಶ್ರೀರಾಮುಲುಗೆ ಬೆಂಬಲ ನೀಡುವ ಯೋಜನೆ ಹೊಂದಿತ್ತು. ಈಗಲೂ ಕೂಡ ಶ್ರೀರಾಮುಲು ಮಾನಸಿಕವಾಗಿ ಜೆಡಿಎಸ್ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ವರಿಷ್ಠರು ಈ ಎಲ್ಲಾ ಮಾಹಿತಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯ ಮೇಲೆ ಛಾಯೆ ಆವರಿಸಬಾರದು ಎಂದು ಲೆಕ್ಕಾಚಾರ ಹಾಕಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನಂತರ ಶ್ರೀರಾಮುಲು ರಾಜೀನಾಮೆಯನ್ನು ಅಂಗೀಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಸ್ಪೀಕರ್ ಬೋಪಯ್ಯ 'ಟೈಮ್ ಕಿಲ್ಲಿಂಗ್" ತಂತ್ರ ಅನುಸರಿಸುತ್ತಿದ್ದಾರೆ.
ಶ್ರೀರಾಮುಲು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಚುನಾವಣೆ ಎದುರಿಸುವಷ್ಟರಲ್ಲಿ ಅವರ ವರ್ಚಸ್ಸು - ಹಣ, ಜನಬೆಂಬಲ - ಸಂಘಟನಾ ಚತುರತೆ ಹೇಗಿರುತ್ತದೆ ಎನ್ನುವುದರ ಮೇಲೆ ದೃಷ್ಟಿ ನೆಟ್ಟಿರುವ ದೇವೇಗೌಡರು, ಆ ದಿನಗಳಿಗಾಗಿ ಈಗಿನಿಂದಲೇ ತಂತ್ರಗಾರಿಕೆ ನಡೆಸಿದ್ದಾರೆ.