ಜೈಲಿನಲ್ಲಿ ಮರದ ಕೆಳಗೆ ಸ್ನಾನ ಮಾಡುತ್ತಿರುವ ಗಣಿ ಧಣಿ

ಕುತೂಹಲಕಾರಿ ಸಂಗತಿಯೆಂದರೆ ಜೈಲಿನಲ್ಲೂ ಅವರೇ ಅತ್ಯಂತ ಶ್ರೀಮಂತ. ಏನಾಯಿತೆಂದರೆ ಕಳೆದ ಸೋಮವಾರ ನಸುಕಿನಲ್ಲಿ ಸಿಬಿಐ ಅಧಿಕಾರಿಗಳು ಬಳ್ಳಾರಿಯಲ್ಲಿ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಮನೆಯಲ್ಲಿರುವವರು ಸಣ್ಣ ವಸ್ತುವನ್ನೂ ಮುಟ್ಟುವಂತಿಲ್ಲ. ಆದರೂ ಅದು ಹೇಗೋ, ಮೂಂದಾಲೋಚನೆಯಿಂದ ಜನಾರ್ದನರು ಕೈಗೆ ಸಿಕ್ಕಿದಷ್ಟು ಹಣವನ್ನು ತಮ್ಮ ಜೇಬುಗಳಿಗೆ ತುಂಬಿಕೊಂಡಿದ್ದಾರೆ.
ಆದನ್ನು ಚಂಚಲಗೂಡ ಜೈಲುವರೆಗೂ ತಂದಿದ್ದಾರೆ. ಸೋಮವಾರದ ಗೋಧೂಳಿ ಸಮಯದಲ್ಲಿ ಜೈಲು ಪ್ರವೇಶವಾಗುತ್ತಿದ್ದಂತೆ ಕೈದಿಗಳ ಆಸ್ತಿ ಖಾತೆಯಲ್ಲಿ (PPA) ಜನಾ ರೆಡ್ಡಿ ಹೆಸರಿನಲ್ಲಿ 30,000 ರುಪಾಯಿಯಿತ್ತು. ಇನ್ನು ಆತನ ಜತೆ ಬಂಧಿಯಾದ ಶ್ರೀನಿವಾಸ ರೆಡ್ಡಿ ಬಳಿ 20,000 ರುಪಾಯಿಯಿತ್ತು.
ಈ ಹಣದ ಬಗ್ಗೆ ಯಾಕೆ ಹೇಳಲಾಗುತ್ತಿದೆ ಎಂದರೆ PPA ಖಾತೆಯಲ್ಲಿರುವ ಹಣದಿಂದ ಜೈಲು ಕ್ಯಾಂಟೀನಿನಲ್ಲಿ ಕೈದಿಗಳು ಏನು ಬೇಕಾದರೂ (ಕ್ಯಾಂಟೀನ್ ಸಿಗುವ ಯಾವುದೇ ವಸ್ತು) ಖರೀದಿಸಬಹುದು. ಹೀಗಾಗಿ ರೆಡ್ಡಿ ದ್ವಯರು ಟೂತ್ ಪೇಸ್ಟ್, ಟೂತ್ ಬ್ರಷ್ ಮತ್ತು ಬಿಸ್ಕತ್ತುಗಳನ್ನು ಖರೀದಿಸುತ್ತಿದ್ದಾರೆ.
ಇವರಿಬ್ಬರೂ ನಾಲ್ಕನೇ ಬ್ಯಾರಕ್ ಡಿ ಸೆಲ್ ನಲ್ಲಿ ಠಿಕಾಣಿ ಹೂಡಿದ್ದಾರೆ. ಇಲ್ಲಿ ಅಟಾಚ್ಡ್ ಟಾಯ್ಲೆಟ್ ಇದೆಯಾದರೂ ಇಬ್ಬರೂ ಸೆಲ್ ಹೊರಗೆ ಮರಗಳ ಕೆಳಗೆ ಬಟಾಬಯಲಿನಲ್ಲಿ ಸ್ನಾನ ಮಾಡಬೇಕಾಗಿದೆ. ಆಗ ಇತರೆ ಕೈದಿಗಳೂ ಇವರಿಗೆ ಜತೆಯಾಗುತ್ತಾರೆ.
44 ವರ್ಷದ ಜನಾರ್ದನ ರೆಡ್ಡಿ, ಬಳಲಿದಂತೆ ಕಾಣುತ್ತಿದ್ದಾರೆ. ಜೈಲುಪ್ರವೇಶದ ವೇಳೆ ಅವರು 93 ಕೆಜಿ ತೂಗಿದ್ದರು. ಈಗಾಗಲೇ ಒಂದು ವಾರ ಜೈಲಿನಲ್ಲಿರುವ ರೆಡ್ಡಿ ದೇಹತೂಕ ಒಂದಷ್ಟು ಕರಗುವುದು ಖಚಿತ ಎಂದು ಜೈಲು ಮೂಲಗಳು ತಿಳಿಸಿವೆ.












Click it and Unblock the Notifications