ವಾರಾಂತ್ಯಕ್ಕೆ ಜಗನ್, ರಾಮುಲು ಸೆರೆಗೆ ಮುಹೂರ್ತ ಫಿಕ್ಸ್
ಜನಾರ್ದನ ರೆಡ್ಡಿ ಜತೆ ವ್ಯವಹಾರ ಪಾಲುದಾರಿಕೆ ಹೊಂದಿರುವ 85 ಮಂದಿಯ ಪಟ್ಟಿಯಲ್ಲಿ ಶ್ರೀರಾಮುಲು, ಜಗನ್ ಪ್ರಮುಖರಾಗಿದ್ದಾರೆ. ಓಬಳಾಪುರಂ ಮೈನಿಂಗ್ ಕಂಪನಿ, ರೆಡ್ ಗೋಲ್ಡ್ , ಐ2 ಗ್ಲೋಬಲ್ ಸಲ್ಯೂಷನ್ , ಬ್ರಹ್ಮಿಣಿ ಹಾಗೂ ಜಗನ್ ಒಡೆತನದ ಇತರ ಕಂಪನಿಗಳ ಜತೆ ನಡೆದಿರುವ ಹಣಕಾಸು ವಹಿವಾಟು ಸಂಶಯಾಸ್ಪದವಾಗಿರುವ ಹಿನ್ನೆಲೆಯಲ್ಲಿ ಜಗನ್ ಹಾಗೂ ಶ್ರೀರಾಮುಲು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಸಿಬಿಐ ನಿರ್ಧರಿಸಿದೆ.
ಬ್ರಹ್ಮಿಣಿಯ ಸುತ್ತಮುತ್ತ: 2006ರಲ್ಲಿ ಬ್ರಹ್ಮಿಣಿ ಸ್ಟೀಲ್ ಕಂಪನಿ ಸ್ಥಾಪನೆಗೆ ಜನಾರ್ದನ ರೆಡ್ಡಿ ಆಂಧ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಖುದ್ದು ಮುತುವರ್ಜಿವಹಿಸಿ ಅನಂತಪುರ ಹಾಗೂ ಕಡಪ ಜಿಲ್ಲೆಗಳ ಗಡಿ ಭಾಗದ ತಾಡಿಪತ್ರಿ ತಾಲ್ಲೂಕು ವ್ಯಾಪ್ತಿಯ ಅದರಲ್ಲೂ ಪುಲವೆಂದಲ (ವೈಎಸ್ಆರ್ ಸ್ಪರ್ಧಿಸುತ್ತಿದ್ದ ವಿಧಾನಸಭಾ ಕ್ಷೇತ್ರ) ಭಾಗಕ್ಕೆ ಹೊಂದಿಕೊಂಡಂತೆ ಒಂದು ಸಾವಿರ ಎಕರೆ ಸರ್ಕಾರಿ ಜಮೀನು ಸೇರಿದಂತೆ 4 ಸಾವಿರ ಎಕರೆ ಭೂಮಿಯನ್ನು ಬ್ರಹ್ಮಿಣಿ ಕಂಪನಿಗೆ ಮಂಜೂರು ಮಾಡಿದ್ದರು.
20 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಬ್ರಹ್ಮಿಣಿ ಯೋಜನೆಯ ಪ್ರಾಥಮಿಕ ಹಂತದ ಕಾಮಗಾರಿಯೂ ಆರಂಭವಾಗಿತ್ತು. ಆದರೆ 2009ರಲ್ಲಿ ವೈಎಸ್ಆರ್ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಈ ಕಂಪನಿಯ ಚಟುವಟಿಕೆಗೆ ತೀವ್ರ ಹಿನ್ನಡೆಯುಂಟಾಗಿತ್ತು. ಅಷ್ಟರಲ್ಲಿ ಜಗನ್ ತನ್ನ ಒಡೆತನದಲ್ಲಿದ್ದ ಭಾರತಿ ಸಿಮೆಂಟ್ ಸೇರಿದಂತೆ ಹಲವು ಉದ್ಯಮಗಳನ್ನು ಮಾರಾಟ ಮಾಡಲು ಆರಂಭಿಸಿದ್ದರು. ಇದರ ಜತೆಗೆ ಬ್ರಹ್ಮಿಣಿ ಯೋಜನೆಯನ್ನು ಕೈಬಿಡುವಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.