ಶ್ರೀರಾಮುಲು, ಕರುಣಾ ಮನೆ ಮೇಲೆ ಸಿಬಿಐ ದಾಳಿ
ನಗರದ ವಿಂಡ್ಸರ್ ಮ್ಯಾನರ್ ಹೋಟೆಲ್ ಸಮೀಪದ ಸೆವೆನ್ ಮಿಸ್ಟರ್ ಕ್ವಾಟರ್ಸ್ ನಲ್ಲಿರುವ ಮಾಜಿ ಸಚಿವ ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ಅವರ ನಿವಾಸದ ಮೇಲೆ ಸಿಬಿಐ ಹೆಚ್ಚುವರಿ ಎಸ್ಪಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸಿಬಿಐ ತಂಡ ಹಲವಾರು ದಾಖಲೆಗಳನ್ನು ಪರಿಶೀಲಿಸಿ, ವಶಪಡಿಸಿಕೊಂಡಿದೆ.
ರಾಮುಲು ಬೆಟ್ಟ ಚಾರಣ : ಈ ಮಧ್ಯೆ ಮೈಸೂರಿನಲ್ಲಿ ಬಿಗಿ ಭದ್ರತೆ ನಡುವೆ ಚಾಮುಂಡಿ ಬೆಟ್ಟ ಹತ್ತುತ್ತಿರುವ ಶ್ರೀರಾಮುಲು ಅವರು ತಮ್ಮ ನಿವಾಸದ ಮೇಲೆ ನಡೆದಿರುವ ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಯತ್ನಿಸಿದರೂ ನೆಟ್ ವರ್ಕ್ ಪ್ರಾಬ್ಲಂ ನಿಂದ ಸಾಧ್ಯವಾಗಿಲ್ಲ.
ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸಿ ಬಂದ ನಂತರ ಸ್ವಾಭಿಮಾನ ಯಾತ್ರೆ ಆರಂಭಿಸುವುದಾಗಿ ಹೇಳಿದ್ದರು. ಈ ನಿಮಿತ್ತ ಬೆಟ್ಟದ ತಾಯಿ ಆಶೀರ್ವಾದ ಬೇಡಲು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ.
'ನಮ್ಮ ಮನೇಲಿ ಏನು ಸಿಗಲ್ಲ, ವಿನಾಕರಣ ಆರೋಪ ಹೊರೆಸಿ ದಾಳಿ ನಡೆಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನ ಬೆಂಬಲ ನಮಗಿದೆ, ಜನರನ್ನು ಅರೆಸ್ಟ್ ಮಾಡಲಿ ಬೇಕಾದರೆ' ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.