ಜನಾ ರೆಡ್ಡಿ ಬಂಧನ: ಸೋನಿಯಾ ಪ್ರತಿಕೃತಿ ದಹನ
ಓಬಳಾಪುರಂ ಮೈನಿಂಗ್ ಗೂ ಕರ್ನಾಟಕದ ಗಣಿಗಾರಿಕೆಗೂ ಸಂಬಂಧವಿಲ್ಲ. ಸಿಬಿಐ ಅನ್ನೋದು ಕಾಂಗ್ರೆಸ್ ಕೈಗೊಂಬೆ ಎಂಬುದು ಸಾಬೀತಾಗಿದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯಲ್ಲಿ ಬೆಂಕಿ: ಈ ನಡುವೆ ನಗರದ ಎಸ್ ಪಿ ಸರ್ಕಲ್ ನಲ್ಲಿ ಆರಂಭವಾದ ಪ್ರತಿಭಟನೆ ಕೌಲ್ ಬಜಾರ್, ರೇಡಿಯೋ ಪಾರ್ಕ್, ರಾಯಲ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಕ್ಕೆ ಹಬ್ಬಿದೆ. ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ಬಂಧನವನ್ನು ಖಂಡಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಸಿರಗುಪ್ಪ, ಹೋಸಪೇಟೆ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಿಂದ ನೂರಾರು ಜನ ಕಾರ್ಯಕರ್ತರು ಬಳ್ಳಾರಿ ನಗರಕ್ಕೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೈಕ್ ಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಬಂಧನ ವಿರೋಧಿಸಿ ಬಳ್ಳಾರಿ ಬಂದ್ ಗೆ ಶಾಸಕ ಸೋಮಶೇಖರ ರೆಡ್ಡಿ ಕರೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಬಿಗುವಿನ ವಾತಾವರಣವಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ. ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಡಿಎಸ್ ಪಿ ನಾಗರಾಜ್ ಹೇಳಿದ್ದಾರೆ.