ಉಪಚುನಾವಣೆ ಪ್ರಚಾರಕ್ಕೆ ಕಳಂಕಿತ ಯಡಿಯೂರಪ್ಪ ಬೇಕಾ?
ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಕೆ ಅಥವಾ ಬೇಡವೆ? ಇದರಿಂದಾಗುವ ಲಾಭ ನಷ್ಟದ ಪರಿಣಾಮಗಳೇನು ಎಂಬುದರ ಬಗ್ಗೆ ಬಿಜೆಪಿ ನಾಯಕರು ಇದೀಗ ಗಂಭೀರವಾಗಿ ಲೆಕ್ಕಾಚಾರ ಹಾಕುತ್ತಿದ್ದಾರೆ.
ಒಂದು ವೇಳೆ ಯಡಿಯೂರಪ್ಪ ಅವರನ್ನು ಪ್ರಚಾರದಲ್ಲಿ ಬಳಸಿಕೊಂಡರೆ ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ವಾಗ್ಧಾಳಿ ನಡೆಸಬಹುದು ಎಂಬ ಭೀತಿ ಒಂದೆಡೆಯಾದರೆ, ಪ್ರಚಾರದಿಂದ ಯಡಿಯೂರಪ್ಪ ಅವರನ್ನು ದೂರವಿಟ್ಟರೆ ಲಿಂಗಾಯತ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿರುವ ಕೊಪ್ಪಳದಲ್ಲಿ ಗೆಲ್ಲುವುದು ಕಷ್ಟವಾಗಬಹುದೇನೊ ಎಂಬ ಆತಂಕವೂ ಕಾಡುತ್ತಿದೆ.
ಹೀಗಾಗಿ ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಭಾನುವಾರ ನಡೆಯಲಿರುವ ಬಿಜೆಪಿ ಮುಖಂಡರ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಉಪಚುನಾವಣೆಯಲ್ಲಿ ಭ್ರಷ್ಟಾಚಾರವನ್ನೇ ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸಲಾಗುವುದು ಎಂದು ಈಗಾಗಲೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಘೋಷಿಸಿರುವುದರಿಂದ ಆಡಳಿತಾರೂಢ ಬಿಜೆಪಿಗೆ ಯಡಿಯೂರಪ್ಪ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ.
ಒಟ್ಟಾರೆ, ಯಡಿಯೂರಪ್ಪ ಅವರು ಕೊಪ್ಪಳ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ನ್ಯಾಯಾಲಯದಲ್ಲಿನ ಮುಂದಿನ ಬೆಳವಣಿಗೆಗಳು ಮತ್ತು ರಾಜ್ಯ ಬಿಜೆಪಿ ನಾಯಕರ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಹೈಕಮಾಂಡ್ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಆದರೆ, ರಾಜ್ಯ ಬಿಜೆಪಿ ನಾಯಕರಲ್ಲಿ ಯಡಿಯೂರಪ್ಪ ಅವರು ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಭಿನ್ನಾಭಿಪ್ರಾಯ ಮೂಡಿದಲ್ಲಿ ಆಗ ಖಂಡಿತವಾಗಿಯೂ ಹೈಕಮಾಂಡ್ ಬೇಡ ಎಂತಲೇ ಹೇಳುವ ಸಂಭವ ಹೆಚ್ಚಾಗಿದೆ.