ಕರಡಿ ಕರೆತಂದ ಯಡಿಯೂರಪ್ಪ ಚುನಾವಣೆ ಪ್ರಚಾರದಿಂದ ದೂರ
ಜತೆಗೆ ಯಡಿಯೂರಪ್ಪ ಅವರ ಬೆಂಬಲಿಗ ಮಂತ್ರಿಗಳು ಹಾಗೂ ಶಾಸಕರು ಕೂಡ ತಮ್ಮ ನಾಯಕನನ್ನು ಪ್ರಚಾರದಲ್ಲಿ ಬಳಸಿಕೊಳ್ಳಲು ಒತ್ತಡ ಹೇರುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರ ಆಗಮನದಿಂದಲೇ ಗೆಲ್ಲುವಂತಾಯಿತು. ಅವರ ವರ್ಚಸ್ಸು ಕುಂದಿಲ್ಲ ಎಂಬುದನ್ನು ಸಾಬೀತುಪಡಿಸುವ ಅನಿವಾರ್ಯತೆಯೂ ಯಡಿಯೂರಪ್ಪ ಬೆಂಬಲಿಗರಲ್ಲಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಖುದ್ದು ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಕಳೆದೊಂದು ತಿಂಗಳಿಂದ ಯಾವುದೇ ಪ್ರವಾಸವಿಲ್ಲದೆ ಕುಳಿತಿರುವ ಯಡಿಯೂರಪ್ಪ ಅವರು ಈ ಒಂದು ಸಂದರ್ಭವನ್ನು ಬಳಸಿಕೊಂಡು ಮತ್ತೆ ಜನರ ಬಳಿಗೆ ಹೋಗಲು ಮುಂದಾಗುವ ಅವಕಾಶವನ್ನು ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಮೆ.
ಹಾಗೊಂದು ವೇಳೆ ಯಡಿಯೂರಪ್ಪ ಅವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಬಯಸಿದಾಗಲೂ ಬಿಜೆಪಿ ನಾಯಕರು ನಿರಾಕರಿಸಿದಲ್ಲಿ ಅದು ಮತ್ತೂಂದು ಸುತ್ತಿನ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಯಡಿಯೂರಪ್ಪ ಅವರನ್ನು ಕೊಪ್ಪಳ ಉಪಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ಬಿಜೆಪಿ ನಾಯಕರಿಗೆ ಮತ್ತೂಂದು ಹೊಸ ಸಮಸ್ಯೆಯಾಗಿಯೇ ಕಾಡುವುದಂತೂ ನಿಶ್ಚಿತ ಎನ್ನುವಂತಾಗಿದೆ.
ಅಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಸುಮಾರು 12 ಮಂತ್ರಿಗಳು ಹಾಗೂ ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಚುನಾವಣಾ ಕಾರ್ಯತಂತ್ರ, ಪ್ರಚಾರ ಸ್ವರೂಪ, ಚುನಾವಣಾ ಉಸ್ತುವಾರಿಗಳ ನೇಮಕ ಮತ್ತಿತರ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.