ಜೆಡಿಎಸ್ ಯಜಮಾನನನ್ನು ಕೆಳಗಿಸಲು ಗೌಡರ ಹುನ್ನಾರ!

ಪ್ರತಿ ಸಂದರ್ಭದಲ್ಲೂ ನಕ್ಷತ್ರ, ತಿಥಿ, ವಾರ, ಘಳಿಗೆ, ರಾಶಿ, ಮುಹೂರ್ತಗಳನ್ನು ನೋಡುತ್ತಲೇ ರಾಜಕೀಯ ಏಳ್ಗೆಯನ್ನು ಸಾಧಿಸುತ್ತಿರುವ ಎಚ್.ಡಿ. ದೇವೇಗೌಡರು ಕಳೆದ ಒಂದು ತಿಂಗಳಿನಿಂದಲೂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ಕೆಳಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದ್ದಾರೆ. ಸಂಘಟನಾ ಚತುರ, ಪ್ರಾಮಾಣಿಕ ಹಾಗೂ ನಿಷ್ಠಾವಂತ ಯುವ ಹೊಸ ನಾಯಕನಿಗಾಗಿ ಶೋಧಿಸುತ್ತಿದ್ದಾರೆ.
ಹೊಸ ನಾಯಕರ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಲಿಂಗಾಯಿತ - ಕುರುಬ ಜನಾಂಗದ ಕೆಲವರ ಹೆಸರುಗಳು ಚಾಲ್ತಿಯಲ್ಲಿವೆ. ಹಲವರ ಜಾತಕಗಳ ಶೋಧನೆ ಕೂಡ ನಡೆದಿದೆ. ಬಂಗಾರಪ್ಪ ಅವರಿಗೆ ಹಿರಿತನ, ಅನುಭವ, ಸ್ವಂತ ಪಕ್ಷಗಳನ್ನು ಕಟ್ಟಿ ಸಂಘಟಿಸಿದ ಸಾಕಷ್ಟು ಪರಿಣತಿ ಇರುವ ಹಿನ್ನೆಲೆಯಲ್ಲಿ ಅವರ ನಾಯಕತ್ವಕ್ಕೆ ಬಹುತೇಕ ಗ್ರೀನ್ಸಿಗ್ನಲ್ ಸಿಗುವ ಸಾಧ್ಯತೆಗಳಿವೆ.
ಆದರೆ, ಬಂಗಾರಪ್ಪ ಅವರ ಆರೋಗ್ಯದಲ್ಲಿ ಸ್ಥಿರತೆ ಇರದ ಕಾರಣ ಅವರ ನೇತೃತ್ವದಲ್ಲಿ ಲಿಂಗಾಯಿತ ಮತ್ತು ಕುರುಬ ಮುಖಂಡರನ್ನು ಒಟ್ಟಾಗಿಸಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಯೋಜನೆ ರೂಪಿಸಬೇಕು ಎನ್ನುವ ಚಿಂತನೆ ದೇವೇಗೌಡರದು. ಅಷ್ಟೇ ಅಲ್ಲ, ತಮ್ಮ ರಾಜಕೀಯ ಎದುರಾಳಿ ಬಿ.ಎಸ್. ಯಡಿಯೂರಪ್ಪರನ್ನು ರಾಜಕೀಯವಾಗಿ ಅವಸಾನಗೊಳಿಸಲು ಶಿವಮೊಗ್ಗದ ಬಂಗಾರಪ್ಪನೇ ಸೂಕ್ತ ವ್ಯಕ್ತಿ ಎಂಬ ಚಿಂತನೆಯಲ್ಲಿದ್ದಾರೆ.
ಇನ್ನು ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಪ್ರತೀಕಾರಕ್ಕಾಗಿ ಹಪಹಪಿಸುತ್ತಿರುವ ಬಂಗಾರಪ್ಪ ಕೂಡ ಸಮರ್ಥವಾಗಿ ಹೋರಾಡುವವರು ಎನ್ನುವ ರಾಜಕೀಯ ಲೆಕ್ಕಾಚಾರ. ಬಂಗಾರಪ್ಪನವರಿಗೆ ಶಿವಮೊಗ್ಗದ ಈಡಿಗರ ಬೆಂಬಲ ಈಗಲೂ ಇದೆ ಎನ್ನುವ ನಂಬಿಕೆ.
ಪಕ್ಷದ ಸಂಘಟನೆಯ ಸಂವಿಧಾನವನ್ನು ಬದಲಾಯಿಸಿ ಈ ಎಲ್ಲಾ ಸಾಹಸಗಳಿಗೆ ಕೈಹಾಕಬೇಕು. ಯತ್ನಾಳರನ್ನು ಮತ್ತು ಬಂಡೆಪ್ಪ ಕಾಶೆಂಪುರ ಅವರನ್ನು ಪಕ್ಷದ ಜವಾಬ್ದಾರಿಯುತ ಸ್ಥಾನಗಳಿಗೆ ನೇಮಿಸಬೇಕು. ಈ ಇಬ್ಬರ ಜೊತೆಯಲ್ಲೇ ಲಿಂಗಾಯಿತ ಉಪ ಪಂಗಡಗಳು, ಮುಸ್ಲಿಂಮರು ಮತ್ತು ದಲಿತರನ್ನು ಪಕ್ಷದ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಬೇಕು. ಈ ತಂಡದ ಇತರೆ ಕಾರ್ಯಚಟುವಟಿಕೆಗಳನ್ನು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ನಿರ್ವಹಿಸುವರು. ಎಚ್.ಡಿ. ರೇವಣ್ಣ ಅವರು ತಂದೆಗೆ ಸಹಾಯಕರಾಗಿ, ತಂದೆಗೆ ನಿಷ್ಠರಾಗಿ ರಾಜ್ಯ ಮತ್ತು ರಾಷ್ಟ್ರೀಯ ತಂಡಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಾರೆ ಎನ್ನುವುದು ರಾಜಕೀಯ ವ್ಯಾಕರಣ.












Click it and Unblock the Notifications