ಜಾತಕದ ಬೆಂಬಲವೂ ಇಲ್ಲ, ಪಕ್ಷದ ಬೆಂಬಲವೂ ಇಲ್ಲ
ಕುಮಾರಸ್ವಾಮಿ ಮತ್ತು ಅನಿತಾಕುಮಾರಸ್ವಾಮಿ ಲೋಕಾಯುಕ್ತರ ಪ್ರಕರಣದಲ್ಲಿ ಆರೋಪಿಗಳಾಗಿರುವಾಗ ಪಕ್ಷದ ಬೆಂಬಲ ಅತ್ಯಗತ್ಯ. ಇಂಥ ಸಂದರ್ಭದಲ್ಲಿ ಕುಮಾರಸ್ವಾಮಿಯನ್ನು ಪದಚ್ಯುತಗೊಳಿಸಿದಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಯಲಾಗುವ ಸಾಧ್ಯತೆಗಳಿವೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಹಾಗೂ ಇಡೀ ಕುಟುಂಬದ ಸದಸ್ಯರ ಮೇಲೆ ಭ್ರಷ್ಟಾಚಾರ ಆರೋಪ ಬಂದಾಗ ಕುಮಾರಸ್ವಾಮಿ ಓರ್ವರೇ ತಮ್ಮ ಬೆಂಬಲಿಗರ ಜೊತೆ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ಗೌಡರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಂತೋಷ್ ಹೆಗ್ಡೆ ಅವರನ್ನು 'ರಾತ್ರಿಖರ್ಚು" ವಿಚಾರದಲ್ಲಿ ಟೀಕಿಸಿದಾಗ ದೇವೇಗೌಡರೇ ಸಾರ್ವಜನಿಕವಾಗಿ ಸಂತೋಷ್ ಹೆಗ್ಡೆ ಅವರಲ್ಲಿ ಕ್ಷಮೆ ಕೋರಿ, ಕುಮಾರಸ್ವಾಮಿಗೆ ಮೌನವಾಗಿರುವಂತೆ ತಾಕೀತು ಮಾಡಿದ್ದರು.
ಯಡಿಯೂರಪ್ಪ ಅವರ ವಿರುದ್ಧ ಹೋರಾಡಲು ಬಹುತೇಕ ದಾಖಲೆಗಳನ್ನು ಬಳ್ಳಾರಿಯ ಜನಾರ್ದನ ರೆಡ್ಡಿಯೇ ಕುಮಾರಸ್ವಾಮಿಗೆ ತಲುಪಿಸಿದ್ದರು. ಆದರೆ, ಜನಾರ್ದನ ರೆಡ್ಡಿ ಕಳುಹಿಸಿದ್ದ ದಾಖಲೆಗಳ ಸತ್ಯಾಸತ್ಯತೆ - ಪೂರ್ವಾಪರಗಳನ್ನು ಪರಾಮರ್ಶಿಸದೇ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಏರ್ಪಡಿಸಿ ಬಿ.ಎಸ್.ವೈ ವಿರುದ್ಧ ಮಾತನಾಡಿದ್ದರು. ಇಲ್ಲಿ ಜನಾರ್ದನ ರೆಡ್ಡಿ ಅವರು ಬಿ.ಎಸ್.ವೈ ವಿರುದ್ಧದ ತಮ್ಮ ಶತೃತ್ವ - ಹಗೆತನ ಸಾಧಿಸಲು ಕುಮಾರಸ್ವಾಮಿಯನ್ನು ದಾಳವಾಗಿ ಬಳಕೆ ಮಾಡಿಕೊಂಡಿದ್ದು ಜೆಡಿಎಸ್ನ ಎಲ್ಲಾ ಕಾರ್ಯಕರ್ತರಲ್ಲೂ, ಬಳ್ಳಾರಿಯಲ್ಲೂ ಮನೆ ಮಾತಾಗಿ ಉಳಿದಿದೆ.
ಬಿ. ಶ್ರೀರಾಮುಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೂಡ ಅನೇಕ ಸಂದರ್ಭಗಳಲ್ಲಿ ಕುಮಾರಸ್ವಾಮಿ ಅವರೇ ನೇರವಾಗಿ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಎಲ್ಲಿಯೇ ಇರಲಿ ಅವರ ಖಾಸಗಿ ಆಪ್ತ ಸಹಾಯಕರ ಮೊಬೈಲ್ಗಳ ಮೂಲಕ ಕುಮಾರಸ್ವಾಮಿಯನ್ನು ಸಂಪರ್ಕಿಸುತ್ತಲೇ ಯಡಿಯೂರಪ್ಪ ಅವರ ವಿರುದ್ಧದ ಹೋರಾಟಕ್ಕೆ ಪ್ರೋತ್ಸಾಹ - ಪ್ರೇರಣೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿಗೆ ಈಗಲೂ ರಾಜ್ಯಾದ್ಯಂತ 'ಉತ್ತಮ ನಾಯಕ"ನ ಪಟ್ಟವಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ಸಂಘಟನೆ ಆಗುತ್ತಿಲ್ಲ. ಹೈದರಾಬಾದ್ - ಕರ್ನಾಟಕ ಪ್ರದೇಶದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಬಳ್ಳಾರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಅವರು ಮಾತ್ರ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದ್ದಾರೆ.
ಈ ಎಲ್ಲಾ ಕಾರಣಗಳಿಗೆ ಪೂರಕವಾಗಿ ಪಕ್ಷದ ವರ್ಚಸ್ಸು, ಸಂಘಟನೆ ಹಾಗೂ ಇನ್ನಿತರೆ ಕಾರಣಗಳಿಗಾಗಿ ಕುಮಾರಸ್ವಾಮಿ ಅವರಿಗೆ ಟೈಂ ಚೆನ್ನಾಗಿಲ್ಲ. ಜಾತಕದಲ್ಲಿಯ ದಶಾಭುಕ್ತಿ, ಅಂತರ್ದೆಸೆಗಳ ಪ್ರಕಾರ ಅವರ ವ್ಯಕ್ತಿತ್ವ ಮೆರಗುಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಷಕ್ಕೆ ಹೊಸತನ ನೀಡಬೇಕು. ಪಕ್ಷವನ್ನು ಹೊಸದಾಗಿ ಸಂಘಟಿಸಬೇಕು. ಕುಮಾರಸ್ವಾಮಿಯನ್ನು ದಟ್ಟವಾಗಿ ಆವರಿಸಿರುವ ಆಪ್ತರನ್ನು ಅವರಿಂದ ದೂರಕ್ಕೆ ತಳ್ಳಬೇಕು ಎಂದು ಪಕ್ಷ ನಿರ್ಧರಿಸಿದೆ.