ಖುದ್ದು ಹಾಜರಾತಿಯಿಂದ ಎಚ್ಡಿಕೆ ದಂಪತಿಗೆ ವಿನಾಯತಿ

ಖುದ್ದು ಹಾಜರಿಗೆ ವಿನಾಯತಿ ಕೋರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಅವರ ಪರ ವಕೀಲ ಹಶ್ಮತ್ ಪಾಶಾ ಅವರು ಅರ್ಜಿ ಸಲ್ಲಿಸಿದ್ದರು. ಕುಮಾರಸ್ವಾಮಿ ಅವರು ಹಾರ್ಟ್ ಪೇಶೆಂಟ್, ಅಧಿಕ ರಕ್ತದೊತ್ತಡ ಹಾಗೂ ಅನಿತಾ ಕುಮಾರಸ್ವಾಮಿ ಅವರಿಗೆ ತೀವ್ರ ಜ್ವರ, ಸಂಧಿವಾತ ಹಾಗೂ ಬೆನ್ನು ನೋವು ಕಾಡುತ್ತಿದೆ.
ಇಬ್ಬರು ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವಿನಾಯತಿ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ವಕೀಲರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಾಧೀಶ ಸುಧೀಂದ್ರರಾವ್ ಅವರು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಜಂತಕಲ್ ಮೈನಿಂಗ್ ಎಂಡಿ ವಿನೋದ್ ಗೋಯಲ್ ಅವರಿಗೂ ಕೋರ್ಟ್ ವಿನಾಯತಿ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.5ರಂದು ಮುಂದೂಡಿದ್ದಾರೆ.
ಎಲ್ಲವೂ ನಿರೀಕ್ಷಿತ : ಕೋರ್ಟ್ ಕಟಕಟೆ ಹತ್ತುವುದನ್ನು ತಪ್ಪಿಸಿಕೊಳ್ಳಲು ಯಡಿಯೂರಪ್ಪ ಅವರಂತೆ ಅನಾರೋಗ್ಯದ ನೆಪ ಹಿಡಿಯಬಹುದು ಎಂಬ ಶಂಕೆ ನಿಜವಾಗಿದೆ. ಕೋರ್ಟ್ ಬಂಧನದ ವಾರೆಂಟ್ ವಿಧಿಸುತ್ತದೆ. ಬಂಧನದ ಭೀತಿಗೆ ಒಳಗಾಗಿರುವ ದಂಪತಿಗಳು ಹೆಚ್ಚುಕಮ್ಮಿ ಇವತ್ತು ಕಟಕಟೆಯಲ್ಲಿ ನಿಲ್ಲುವುದು ಗ್ಯಾರಂಟಿ ಎನ್ನಲಾಗಿತ್ತು.
ಜಂತಕಲ್ ಮೈನಿಂಗ್ ಗುತ್ತಿಗೆ ಹಾಗೂ ವಿಶ್ವಭಾರತಿ ಹೌಸಿಂಗ್ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 8 ರಂದು ಲೋಕಾಯುಕ್ತ ವಿಶೇಷ ನ್ಯಾಯಲಯದಿಂದ ಎಚ್ಡಿಕೆ ದಂಪತಿಗೆ ಸಮನ್ಸ್ ಜಾರಿ ಮಾಡಿತ್ತು.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಹಾಗೂ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದ ದಂಪತಿಗೆ ನಿರಾಶೆ ಕಾದಿತ್ತು. ಆದ್ರೆ, ಈಗ ಗೌರಿ ಗಣೇಶ ಹಬ್ಬ ಮುಗಿಯುವ ತನಕ ಕೋರ್ಟ್ ಕಟ್ಲೆಯಿಂದ ದಂಪತಿಗಳು ದೂರಾಗಿ ಹಬ್ಬ ಆಚರಿಸಬಹುದಾಗಿದೆ.











Click it and Unblock the Notifications