‘ಮಾಧ್ಯಮ ಭ್ರಷ್ಟಾಚಾರ: ಈ ಮೌನವಾ ನಾ ತಾಳೆನು, ಅಣ್ಣಾ?’
ನೀರಾ ರಾಡಿಯಾ ಟೇಪ್ಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ಪತ್ರಕರ್ತರ ಕುರಿತು ಸರಕಾರ ತನಿಖೆ ನಡೆಸಲಾರಂಭಿಸಿದರೆ, ಸರಕಾರ ಸ್ಪಂದನ ರಹಿತ ಎಂಬ ಆರೋಪಕ್ಕೆ ಒಳಗಾಗಬಹುದು ಮತ್ತು ಮಾಧ್ಯಮಗಳಿಂದಲೇ ಸಾಮೂಹಿಕ ಪ್ರತಿಭಟನೆ ಎದುರಾಗಬಹುದು ಎಂದು ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಜಾರೆಯ ಲೋಕಪಾಲ ಮಸೂದೆ ಪ್ರಕಾರ, ಮಾಧ್ಯಮ ಭ್ರಷ್ಟಾಚಾರವನ್ನು ಏಕೆ ತನಿಖೆ ನಡೆಸಕೂಡದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಉತ್ತರ ನೀಡಿದ್ದಾರೆ. ಹಜಾರೆ ತಂಡವು ಮಾಧ್ಯಮ ಮತ್ತು ಎನ್ಜಿಒಗಳ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು ಎಂದು ಏಕೆ ಮಾತನಾಡುತ್ತಿಲ್ಲ ಎಂದು ಖುರ್ಷಿದ್ ಪ್ರಶ್ನಿಸಿದರು.
ಧ್ಯಮ ಭ್ರಷ್ಟಾಚಾರ ಮತ್ತು ಲೋಕಪಾಲ ಮಸೂದೆಗೂ ಸಂಬಂಧವೇನು ಎಂದು ಸಂದರ್ಶಕನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಮರು ಪ್ರಶ್ನೆ ಎತ್ತಿದರು.
ಮಾಧ್ಯಮದಲ್ಲಿ ಭ್ರಷ್ಟಾಚಾರ ಇಲ್ಲವೆಂದು ತಮಗೆ ಅನಿಸುತ್ತಿದೆಯೇ ಎಂದು ಅವರು ಸಂದರ್ಶಕನನ್ನೇ ಪ್ರಶ್ನಿಸಿದರು. 'ನಾನು ನೀರಾ ರಾಡಿಯಾ ಟೇಪ್ ಹಗರಣವನ್ನು ನೆನಪಿಸುವ ಆವಶ್ಯಕತೆಯಿದೆಯೇ?" ಎಂದು ಅವರು ಪ್ರಶ್ನಿಸಿದರು. ಮಾಧ್ಯಮಗಳು ಭ್ರಷ್ಟಾಚಾರ ಮುಕ್ತ ಎಂದು ಯಾರೊಬ್ಬರೂ ಹೇಳಲಾಗುವುದಿಲ್ಲ. ನೀರಾ ರಾಡಿಯಾ ಟೇಪ್ನಲ್ಲಿ ಪತ್ತೆಯಾಗಿರುವವರ ಕುರಿತು ತನಿಖೆ ನಡೆಸುವುದು ಸರಕಾರದ ಕೆಲಸ ಎಂದು ಸಂದರ್ಶಕನು ಹೇಳಿದಾಗ, ಸರಕಾರ ಅದನ್ನು ನಡೆಸಿದರೆ ಸರಕಾರವನ್ನು ಟೀಕಿಸಲಾಗುತ್ತದೆ ಎಂದು ಖುರ್ಷಿದ್ ವಾದಿಸಿದರು.
ನೀರಾ ರಾಡಿಯಾ ಟೇಪ್, ಆಕೆ ಮತ್ತು ಉದ್ಯಮ ಲಾಬಿಕೋರರ ನಡುವೆ ನಡೆದ ದೂರವಾಣಿ ಮಾತುಕತೆಗಳ ಧ್ವನಿ ಸುರುಳಿಯಾಗಿದೆ. ರಾಜಕಾರಣಿಗಳು, ಕಾರ್ಪೊರೇಟ್ ವಲಯದ ಲಾಬಿಗಳು, ಕೈಗಾರಿಕೋದ್ಯಮಿಗಳು, ಅಧಿಕಾರಿಗಳು, ಆಡಳಿತಗಾರರು, ಸಹಾಯಕರು ಮತ್ತು ಪತ್ರಕರ್ತರ ನಡುವೆ ನೀರಾ ರಾಡಿಯಾ ನಡೆಸಿದ ಮಾತುಕತೆಗಳು ದಾಖಲಾಗಿವೆ. ಆದಾಯ ತೆರಿಗೆ ಇಲಾಖೆಯು 2008-09ರ ನಡುವೆ ಈ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ದಾಖಲಿಸಿಕೊಂಡಿತ್ತು.